Cleanliness; ಸ್ವಚ್ಛತಾ ಯೋಜನೆಗಳಿಗೆ 3 ಸಾವಿರ ಕೋಟಿ ರೂ.: ಬೈರತಿ ಸುರೇಶ್
Team Udayavani, Dec 8, 2023, 11:59 PM IST
ಬೆಳಗಾವಿ: ರಾಜ್ಯದ ನಗರ ಪ್ರದೇಶ ಗಳ ತ್ಯಾಜ್ಯ ಸಂಸ್ಕರಣೆ ಸಹಿತ ಒಟ್ಟಾರೆ ಸ್ವಚ್ಛತೆ ಯೋಜನೆಗಳಿಗೆ 3 ಸಾ. ಕೋಟಿ ರೂ.ಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೇಳಿದರು.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ಬಿಜೆಪಿಯ ಜ್ಯೋತಿ ಗಣೇಶ ಜಿ.ಬಿ. ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ತುಮಕೂರು ಸಹಿತ ಎಂಟು ಮಹಾನಗರ ಪಾಲಿಕೆಗಳಲ್ಲಿ ಘನತ್ಯಾಜ್ಯ ವಿಲೇವಾರಿಗೆ ಸರಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. 2022ರಿಂದ 2026ರ ಅವಧಿಯಲ್ಲಿ ಸ್ವತ್ಛ ಭಾರತ ಅಭಿಯಾನ ಯೋಜನೆಯಡಿಯಲ್ಲಿ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಸ್ವಚ್ಛತಾ ಯೋಜನೆಗಳಿಗೆ ಈ ಹಣವನ್ನು ಬಳಸಿಕೊಳ್ಳಲಾಗುತ್ತಿದೆ. ತುಮಕೂರು ಸಹಿತ ಏಳು ಮಹಾನಗರ ಪಾಲಿಕೆಗಳ ಘನತ್ಯಾಜ್ಯ ವಿಲೇವಾರಿಗೆ ಅಗತ್ಯ ಯಂತ್ರೋಪಕರಣ, ಸಿವಿಲ್ ಕಾಮಗಾರಿಗಳ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲಾಗಿದೆ. ಇದರನ್ವಯ 370 ಕೋಟಿ ರೂ.ಗಳಿದ್ದು, ಈ ಪೈಕಿ ಕೇಂದ್ರ ಮತ್ತು ರಾಜ್ಯದ ಒಟ್ಟು ಮೊತ್ತ 172 ಕೋ. ರೂ. ಬಿಡುಗಡೆ ಮಾಡಲಾಗಿದೆ ಎಂದರು.