B.L.Santhosh ಅವರು ಈಶ್ವರಪ್ಪ,ಸಿ.ಟಿ.ರವಿ ಅವರಂತೆ ಮಾತನಾಡಬಾರದು:ಡಿ.ಕೆ.ಶಿವಕುಮಾರ್
Team Udayavani, Sep 1, 2023, 11:15 PM IST
ಬೆಂಗಳೂರು: ಕಾಂಗ್ರೆಸ್ನ 40ರಿಂದ 45 ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆಂದು ಬಿಜೆಪಿ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಂತೋಷ್ ಅವರು ಈಶ್ವರಪ್ಪ ಹಾಗೂ ಸಿ.ಟಿ. ರವಿ ಅವರಂತೆ ಮಾತನಾಡಿದರೆ ಏನೂ ಮಾಡಲಾಗದು ಎಂದು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಅವರು ಬೇಕಾದರೆ 136 ಶಾಸಕರ ಜತೆ ಸಂಪರ್ಕ ಇಟ್ಟುಕೊಳ್ಳಲಿ. ಅದರಲ್ಲಿ ತಪ್ಪೇನಿದೆ? ದೇಶ ಆಳುತ್ತಿರುವ ಪಕ್ಷದ ನಾಯಕರು ಅವರು. ಅವರ ಮಾತಿಗೆ ತೂಕ ಇರುತ್ತದೆ. ಹೀಗಾಗಿ ಅವರು ಈ ರೀತಿ ಮಾತನಾಡಬಾರದು ಎಂದು ಮನವಿ ಮಾಡುತ್ತೇನೆ. ಅವರ ಘನತೆಗೆ ಧಕ್ಕೆಯಾಗಬಾರದು. ಕಾಂಗ್ರೆಸ್ ಪಕ್ಷದ ಶಾಸಕರು ಅವರ ಸಂಪರ್ಕದಲ್ಲಿರುವ ಬಗ್ಗೆ ಮಾಹಿತಿ ಇಲ್ಲ. ಈ ಹಿಂದೆ ನಮ್ಮ ವಿರುದ್ಧ ಷಡ್ಯಂತ್ರ ಮಾಡಲು ಸಭೆ ನಡೆದಿತ್ತು, ಈಗ ತಣ್ಣಗಾಗಿದೆ. ಹೆಚ್ಚಿನ ಮಾಹಿತಿಗೆ ಶಾಸಕರನ್ನೇ ಕೇಳಿ ಎಂದು ತಿಳಿಸಿದರು.