ಜೂನ್ ಮೊದಲ ವಾರ ಬಿಎಸ್ವೈ ನೂತನ ಸಿಎಂ
Team Udayavani, May 6, 2019, 3:02 AM IST
ಚಿಂಚೋಳಿ: ಮೇ 23ರಂದು ಲೋಕಸಭಾ ಚುನಾವಣೆ ಫಲಿತಾಂಶದ ನಂತರ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಜೂನ್ ಮೊದಲ ವಾರದಲ್ಲಿ ನೂತನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಚಿಂಚೋಳಿ ಉಪ ಚುನಾವಣೆ ಉಸ್ತುವಾರಿ, ಶಾಸಕ ವಿ.ಸೋಮಣ್ಣ ಭವಿಷ್ಯ ನುಡಿದಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಮತ್ತು ಸ್ಥಳೀಯ ಚುನಾವಣೆ ನಂತರ ಸಿಎಂ ಕುಮಾರಸ್ವಾಮಿ ಅಧಿ ಕಾರದಿಂದ ಕೆಳಗಿಳಿಯಲಿದ್ದಾರೆ. ರಾಜ್ಯ ಸರ್ಕಾರದ ಮೇಲೆ ಜನರು ಇಟ್ಟಿದ್ದ ನಂಬಿಕೆಗಳು ಧೂಳಿಪಟವಾಗಿವೆ. ನೀರಿನ ಮೇಲಿನ ಗುಳ್ಳೆಯಂತೆ ಸಮ್ಮಿಶ್ರ ಸರ್ಕಾರವಿದೆ. ಮೇ 23ರ ನಂತರ ರಾಜ್ಯದ ರಾಜಕೀಯ ಚಿತ್ರಣ ಬದಲಾಗಲಿದೆ.
ಮೈತ್ರಿ ಸರ್ಕಾರ ತಾನೇ ತಾನಾಗಿ ಪತನಗೊಂಡು, ಬಿಜೆಪಿ ಅಧಿಕಾರಕ್ಕೆ ಬರಲಿದೆ. ಯಡಿಯೂರಪ್ಪ ಸಿಎಂ ಆಗಲಿದ್ದಾರೆ. ಆಪರೇಷನ್ ಕಮಲ ನಡೆಸುವ ಅಗತ್ಯವೇ ಇಲ್ಲ ಎಂದರು. ಇದೇ ವೇಳೆ, ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಕುರಿತು ಪ್ರತಿಕ್ರಿಯಿಸಿ, “ನಾನು ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿ ಅಲ್ಲ. ಉತ್ತರ ಕರ್ನಾಟಕ ಭಾಗದ ಯಾರಿಗಾದರೂ ಅಧ್ಯಕ್ಷ ಸ್ಥಾನ ಸಿಗಲಿದೆ’ ಎಂದರು.