ಚಿತ್ರದುರ್ಗ ಕಲುಷಿತ ನೀರು ದುರಂತ: ತನಿಖೆಗೆ ಸಿಎಂ ಸೂಚನೆ
ಯಾರೇ ಕಾರಣರಾಗಿದ್ದರೂ ಕ್ರಮ ಜರುಗಿಸಿ
Team Udayavani, Aug 2, 2023, 11:19 PM IST
ಚಿತ್ರದುರ್ಗ: ಜಿಲ್ಲೆಯ ಕಾವಾಡಿಗರ ಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ಸಾವು ಸಂಭವಿಸಿರುವ ಘಟನೆ ಕುರಿತು ತನಿಖೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಆದೇಶಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥ ಅಧಿಕಾರಿಯನ್ನು ಕೂಡಲೇ ಅಮಾನತು ಮಾಡುವಂತೆಯೂ ಸಿಎಂ ಸೂಚನೆ ನೀಡಿದ್ದಾರೆ.
ಚಿತ್ರದುರ್ಗ ಜಿಲ್ಲಾಧಿಕಾರಿ ಜೊತೆ ದೂರವಾಣಿ ಮೂಲಕ ಮಾತನಾಡಿ ಘಟನೆಯ ಸಂಪೂರ್ಣ ಮಾಹಿತಿ ಪಡೆದುಕೊಂಡ ಮುಖ್ಯಮಂತ್ರಿಗಳು, ಘಟನೆಗೆ ಯಾರೇ ಕಾರಣರಾಗಿದ್ದರೂ ಕ್ರಮ ಜರುಗಿಸುವಂತೆ ಸೂಚಿಸಿದರು.
ಚಿತ್ರದುರ್ಗ ನಗರದ 17ನೇ ವಾರ್ಡ್ ವ್ಯಾಪ್ತಿಯ ಕಾವಾಡಿಗರಹಟ್ಟಿಯಲ್ಲಿ ವಾಂತಿ ಮತ್ತು ಭೇದಿಯಿಂದ ಮಂಜುಳಾ (23) ಎಂಬ ಮಹಿಳೆ ಮೃತಪಟ್ಟಿದ್ದು, 35ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದು, ಘಟನೆಗೆ ಕಲುಷಿತ ನೀರಿನ ಸೇವನೆ ಕಾರಣ ಎನ್ನಲಾಗಿದೆ. ಕಾರ್ಯ ನಿಮಿತ್ತ ಬೆಂಗಳೂರಿಗೆ ತೆರಳಿದ್ದ ಕಾವಾಡಿಗರಹಟ್ಟಿಯ ನಿವಾಸಿ ರಘು (24) ಎಂಬುವವರು ವಾಂತಿ-ಭೇದಿಯಿಂದ ಮೃತಪಟ್ಟಿದ್ದಾರೆ.