ಸಿಎಂ ನೀಡಿದ ಜವಾಬ್ದಾರಿ ನಿರ್ವಹಿಸುವೆ: ಹೆಬ್ಬಾರ್
Team Udayavani, Jan 11, 2020, 3:03 AM IST
ಶಿರಸಿ: “ವಿಧಾನಸಭೆ ಅಧಿವೇಶನಕ್ಕೂ ಮೊದಲೇ ಮಂತ್ರಿ ಪದವಿ ಕೊಡಬೇಕು, ಇಲ್ಲವಾದರೆ ಅಧಿವೇಶನದಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬ ಬೇಡಿಕೆ ಇಟ್ಟಿಲ್ಲ. ಇವೆಲ್ಲಾ ಮಾಧ್ಯಮ ಸೃಷ್ಟಿ. ಸರ್ಕಾರ ಸುಭದ್ರವಾಗಿದೆ. ಸಿಎಂ ಕೊಟ್ಟ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುತ್ತೇನೆ’ ಎಂದು ಶಾಸಕ ಶಿವರಾಮ ಹೆಬ್ಬಾರ್ ಸ್ಪಷ್ಟಪಡಿಸಿದರು. ಸುದ್ದಿಗಾರರ ಜತೆ ಮಾತನಾಡಿ, ರಾಜಕಾರಣದಲ್ಲಿ ಆಸೆಗೆ ಮಿತಿ ಬೇಕು. ಕಾರ್ಯಕರ್ತರಿದ್ದಾಗ ಶಾಸಕನಾಗಬೇಕು, ಶಾಸಕನಾದಾಗ ಮಂತ್ರಿ ಆಗಬೇಕು.
ಇಂತಹದ್ದೇ ಮಂತ್ರಿ ಬೇಕು ಎಂಬುದಿರುತ್ತದೆ. ಯಾವ ಮುಖ್ಯಮಂತ್ರಿಗಳಿಗೂ ಇದನ್ನು ಸಮಾಧಾನ ಮಾಡಲು ಸಾಧ್ಯವಿಲ್ಲ. ನಮ್ಮ ಅರ್ಹತೆ ಮುಖ್ಯಮಂತ್ರಿಗಳಿಗೆ ಗೊತ್ತಿದೆ. ಕೊಟ್ಟ ಜವಾಬ್ದಾರಿಯನ್ನು ಶ್ರದ್ಧೆಯಿಂದ ಮಾಡುತ್ತೇವೆ. ಸರ್ಕಾರಕ್ಕೆ ಮರ್ಯಾದೆ ತರುವ ಕೆಲಸ ಮಾಡುತ್ತೇವೆ. ಈಗಾಗಲೇ ಮುಖ್ಯಮಂತ್ರಿಗಳು ಸಚಿವ ಸಂಪುಟ ವಿಸ್ತರಣೆ ಜ.17, 18ರಂದು ಮಾಡುವುದಾಗಿ ಹೇಳಿದ್ದಾರೆ. ಅವರವರ ಸಾಮರ್ಥ್ಯ ನೋಡಿಯೇ ಮುಖ್ಯಮಂತ್ರಿಗಳು ಜವಾಬ್ದಾರಿ ನೀಡುತ್ತಾರೆ. ಕೊಟ್ಟ ಜವಾಬ್ದಾರಿ ನಿರ್ವಹಿಸುತ್ತೇನೆ, ಒಳ್ಳೆಯದೇ ಆಗಲಿದೆ ಎಂದರು.
ಕದಂಬೋತ್ಸವ ಪಕ್ಕಾ: ಫೆಬ್ರವರಿ ಕೊನೆಯೊಳಗೆ ಕನ್ನಡದ ಪ್ರಥಮ ರಾಜಧಾನಿ ಬನವಾಸಿಯಲ್ಲಿಯೇ ಕದಂಬೋತ್ಸವ ನಡೆಸಲು ಸರ್ಕಾರ ಸಿದ್ಧವಿದೆ. ಈ ಸಂಬಂಧ ಈಗಾಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಜೊತೆ ಮಾತನಾಡಿದ್ದು, ಪ್ರಸಕ್ತ ಸಾಲಿನ ಪಂಪ ಪ್ರಶಸ್ತಿಯನ್ನೂ ಘೋಷಿಸಿದರೆ ಕಳೆದ ವರ್ಷ ಹಾಗೂ ಪ್ರಸಕ್ತ ಸಾಲಿನ ಎರಡೂ ಪ್ರಶಸ್ತಿಯನ್ನು ಬನವಾಸಿಯಲ್ಲಿ ಪ್ರದಾನ ಮಾಡಲಾಗುತ್ತದೆ ಎಂದರು.