ನೀತಿ ಸಂಹಿತೆ: ಶಿಕ್ಷಕರ ವರ್ಗಾವಣೆಗೆ ಅಡ್ಡಿಯಾಗಲ್ಲ
Team Udayavani, May 5, 2019, 3:00 AM IST
ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾಗಿರುವುದರಿಂದ ಶಿಕ್ಷಕರ ವರ್ಗಾವಣೆಗೆ ಮತ್ತೆ ನೀತಿ ಸಂಹಿತೆ ಅಡ್ಡಿಯಾಗುವ ಸಾಧ್ಯತೆ ತುಂಬ ಕಡಿಮೆ ಎಂದು ಹೇಳಲಾಗಿದೆ.
ಲೋಕಸಭೆ ಚುನಾವಣೆಯ ಮಾದರಿ ನೀತಿ ಸಂಹಿತೆ ಸಡಿಲಗೊಳಿಸಿ ನೌಕರರ ವರ್ಗಾವಣೆಗೆ ಚುನಾವಣಾ ಆಯೋಗ ಈಗಾಗಲೇ ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿತ್ತು. ಇದಾದ ಬೆನ್ನಲ್ಲೇ ರಾಜ್ಯದ 62 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಯನ್ನು ಆಯೋಗ ಘೋಷಣೆ ಮಾಡಿತ್ತು.
ಚುನಾವಣೆ ನಡೆಯುವ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಶಿಕ್ಷಕರ ವರ್ಗಾವಣೆಗೆ ಇದರಿಂದ ಮತ್ತೆ ಅಡ್ಡಿಯಾಗಬಹುದಾದ ಆತಂಕ ಶಿಕ್ಷಕರಲ್ಲಿ ಎದುರಾಗಿತ್ತು.
ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆ ಇದೇ ತಿಂಗಳ ಅಂತ್ಯದೊಳಗೆ ಮುಗಿಯುವುದರಿಂದ ಶಿಕ್ಷಕರ ವರ್ಗಾವಣೆ ಮಾರ್ಗಸೂಚಿ ಸಿದ್ಧಪಡಿಸಲು ಅಥವಾ ಹೊರಡಿಸಲು ಅಡ್ಡಿಯಾಗುವ ಸಾಧ್ಯತೆ ಇಲ್ಲ ಎಂದು ರಾಜ್ಯ ಚುನಾವಣಾ ಆಯೋಗ ಹಾಗೂ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುವ ಸ್ಥಳದಲ್ಲಿ ಮಾತ್ರ ನೀತಿ ಸಂಹಿತೆಯಿದ್ದರೂ, ವರ್ಗಾವಣೆ ಅಧಿಸೂಚನೆ ಸಿದ್ಧಪಡಿಸಿ, ಪ್ರಕಟಿಸಲು ಅವಕಾಶ ಇದೆ. ಆದರೆ, ವರ್ಗಾವಣೆ ಆದೇಶ ನೀಡಲು ಅಥವಾ ಹೊಸ ಸ್ಥಳಕ್ಕೆ ವರ್ಗಾವಣೆ ಹೊಂದಿ ಕಾರ್ಯಭಾರ ನಡೆಸಲು ಈ ಅವಧಿಯಲ್ಲಿ ಅವಕಾಶ ಇರುವುದಿಲ್ಲ.
ಅದನ್ನು ಸಂಪೂರ್ಣವಾಗಿ ನೀತಿ ಸಂಹಿತೆ ಮುಗಿದ ನಂತರವೇ ಮಾಡಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಈ ಮಧ್ಯೆ, ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ ಇಲಾಖೆಯ ಉನ್ನತಾಧಿಕಾರಿಗಳು ಈಗಾಗಲೇ ಸಭೆ ಸೇರಿ ಅಧಿಸೂಚನೆಯನ್ನು ಹೊಸದಾಗಿ ಹೊರಡಿಸಬೇಕೇ ಅಥವಾ ಈಗಾಗಲೇ ಬಂದಿರುವ ಅರ್ಜಿಗಳ ಆಧಾರದಲ್ಲೇ ಮುಂದುವರಿಯಬೇಕೇ ಎಂಬುದರ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುವ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ವರ್ಗಾವಣೆ ಪ್ರಕ್ರಿಯೆ ಮಾರ್ಗಸೂಚಿ ಸಿದ್ಧಪಡಿಸಲು ಈ ನೀತಿ ಸಂಹಿತೆ ಅಡ್ಡಿ ಬರುವುದಿಲ್ಲ. ಆದರೆ, ಹುದ್ದೆಯಿಂದ ತೆರವುಗೊಳಿಸಿ, ಹೊಸ ಸ್ಥಳಕ್ಕೆ ನಿಯೋಜನೆ ಮಾಡುವ ಆದೇಶ ನೀಡಲು ಸಾಧ್ಯವಾಗುವುದಿಲ್ಲ.
-ಎನ್.ಆರ್.ನಾಗರಾಜ, ಅಧೀನ ಕಾರ್ಯದರ್ಶಿ, ರಾಜ್ಯ ಚುನಾವಣಾ ಆಯೋಗ.