75 ಕೋಟಿ ಸಂಗ್ರಹ ಮಾಡಿ ಸಿದ್ದರಾಮೋತ್ಸವ ಮಾಡಿದ್ರಲ್ಲಾ: ಈಶ್ವರಪ್ಪ ಕಿಡಿ
ಶಿವಮೊಗ್ಗ ಗಣಪತಿ ವಿಸರ್ಜನೆ: ನನ್ನ ಜೀವನದಲ್ಲಿ ಇಷ್ಟೊಂದು ಸಂಭ್ರಮ ನೋಡಿದ್ದು ಇದೇ ಮೊದಲು
Team Udayavani, Sep 10, 2022, 4:54 PM IST
ಶಿವಮೊಗ್ಗ: ”75 ಕೋಟಿ ರೂ. ಸಂಗ್ರಹ ಮಾಡಿ ಸಿದ್ದರಾಮೋತ್ಸವ ಮಾಡಿದಿರಲ್ಲಾ, ಅದು ರಾಜಕೀಯ ಪ್ರೇರಿತ. ಕಾರ್ಯಕ್ರಮಕ್ಕೆ ಯಾರು ಯಾರು ದುಡ್ಡು ಕೊಟ್ಟರು, ಆ ದುಡ್ಡು ಎಷ್ಟು ಖರ್ಚು ಮಾಡಿದಿರಿ, ಬಸ್ಸಿಗೆ ಎಷ್ಟು ಕೊಟ್ಟಿರಿ, ಜನರಿಗೆ ಎಷ್ಟು ಕೊಟ್ಟಿರಿ, ಅದರ ಲೆಕ್ಕ ಮೊದಲು ಕೊಡಿ” ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಶನಿವಾರ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ್ದಾರೆ.
ಶಿವಮೊಗ್ಗದಲ್ಲಿ ಹೇಳಿಕೆ ನೀಡಿದ ಈಶ್ವರಪ್ಪ ಅವರು, ಬಿಜೆಪಿ ಜನಸ್ಪಂದನಕ್ಕೆ ಸಿದ್ದರಾಮಯ್ಯ ಆರೋಪ ವಿಚಾರಕ್ಕೆ ಕಿಡಿ ಕಾರಿ, ಒಂದು ಕಾರ್ಯಕ್ರಮ ಮಾಡಿ ಕಾಂಗ್ರೆಸ್ ಸರಕಾರವೇ ಬಂತು ಅಂತಾ ಬೀಗಿಕೊಂಡಿದ್ದರು. ಬಿಜೆಪಿ ಇಂತಹ ನೂರು ಕಾರ್ಯಕ್ರಮ ಮಾಡಿದೆ.ಪ್ರಧಾನಿ ಮೋದಿ ಅವರು ಮಂಗಳೂರಿಗೆ ಬಂದಾಗ ಜನಸಾಗರವೇ ಸೇರಿತ್ತು.ದೊಡ್ಡಬಳ್ಳಾಪುರದಲ್ಲಿ ಜನಸ್ಪಂದನ ಕಾರ್ಯಕ್ರಮ ಆಗುತ್ತಿದೆ.ಬಹಳ ದೊಡ್ಡ ಕಾರ್ಯಕ್ರಮ ಆಗುತ್ತಿದೆ.ಚುನಾವಣೆಯವರೆಗೂ ಇಂತಹ ಕಾರ್ಯಕ್ರಮ ನಡೆಸುತ್ತಿರುತ್ತೇವೆ.ಇಂತಹ ಕಾರ್ಯಕ್ರಮ ನೋಡಿ ಕಾಂಗ್ರೆಸ್ ನವರಿಗೆ ಸಮಾಧಾನ ಆಗುತ್ತಿಲ್ಲ.ಇದಕ್ಕೆ ನಾವೇನೂ ಮಾಡುವುದಕ್ಕೆ ಆಗುವುದಿಲ್ಲ ಎಂದರು.
ಶಿವಮೊಗ್ಗದಲ್ಲಿ ಶಾಂತಿಯುತವಾಗಿ ನಡೆದ ಗಣಪತಿ ವಿಸರ್ಜನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಶಿವಮೊಗ್ಗ ಇನ್ನು ಮುಂದೆ ಎಲ್ಲಾ ವಿಚಾರದಲ್ಲೂ ಶಾಂತಿಯಿಂದ ಇರುತ್ತದೆ.ಯಾರೋ ಕೆಲವು ಕಿಡಿಗೇಡಿಗಳು ಶಿವಮೊಗ್ಗದಲ್ಲಿ ಗೊಂದಲ ಉಂಟು ಮಾಡುವ ಪ್ರಯತ್ನ ನಡೆಸಿದ್ದರು.ಸರಕಾರ ಅಂತಹವರಿಗೆ ಸರಿಯಾದ ಬುದ್ದಿ ಕಲಿಸಿದೆ.ಅವರು ಸಹ ಬುದ್ದಿ ಕಲಿತಿದ್ದಾರೆ ಅಂತಾ ನಾನು ಭಾವಿಸುತ್ತೇನೆ, ಅವರ ಹಿರಿಯರು ಸಹ ಬುದ್ದಿ ಹೇಳಿರಬಹುದು ಎಂದರು.
ಶಿವಮೊಗ್ಗ ನಗರದ ಇತಿಹಾಸದಲ್ಲಿ ನಿನ್ನೆ ನಡೆದ ಹಿಂದೂ ಮಹಾ ಸಭಾ ಗಣಪತಿ ಉತ್ಸವದ ವೈಭವದಿಂದ ನಡೆದಿದೆ.ಸಹಸ್ರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.ನನ್ನ ಜೀವನದಲ್ಲಿ ಇಷ್ಟೊಂದು ಸಂಭ್ರಮ ನೋಡಿದ್ದು ಇದೇ ಮೊದಲು ಎಂದರು.