ಕೈ ಪಾಳಯದಲ್ಲಿ ಮುಂದುವರಿದ ಸಚಿವಾಕಾಂಕ್ಷಿಗಳ ಕಸರತ್ತು
Team Udayavani, Jun 2, 2018, 6:00 AM IST
ಬೆಂಗಳೂರು: ಕಾಂಗ್ರೆಸ್ನಲ್ಲಿ ಸಂಪುಟ ಸೇರುವವರ ಪೈಪೋಟಿ ಮುಂದುವರಿದಿದ್ದು, ಸಂಭಾವ್ಯ ಸಚಿವರ ಎರಡು ಪಟ್ಟಿ ಸಿದ್ಧಪಡಿಸಿರುವ ರಾಜ್ಯ ಕಾಂಗ್ರೆಸ್ ನಾಯಕರು, ಹೈಕಮಾಂಡ್ ಒಪ್ಪಿಗೆ ಪಡೆಯಲು ತೀರ್ಮಾನಿಸಿದ್ದಾರೆಂದು ತಿಳಿದು ಬಂದಿದೆ.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೂಚನೆ ಮೇರೆಗೆ ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ಕೆ.ಜೆ.ಜಾರ್ಜ್, ಡಿ.ಕೆ. ಶಿವಕುಮಾರ್, ಶಾಮನೂರು ಶಿವಶಂಕರಪ್ಪ, ರೋಷನ್ ಬೇಗ್ ಹಾಗೂ ಸತೀಶ್ ಜಾರಕಿಹೊಳಿ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡು ಉಳಿದ ಖಾತೆಗಳನ್ನು ಯುವಕರಿಗೆ ನೀಡಲು
ತೀರ್ಮಾನಿಸಲಾಗಿದೆ. ಅದರ ಹೊರತಾಗಿ ಎಚ್. ಕೆ.ಪಾಟೀಲ್, ಆರ್.ವಿ.ದೇಶಪಾಂಡೆ, ರಾಮಲಿಂಗಾ ರೆಡ್ಡಿ, ಎಂ.ಬಿ.ಪಾಟೀಲ್ ಸೇರಿ ಎಲ್ಲ ಹಿರಿಯ ಶಾಸಕರನ್ನೊಳಗೊಂಡ ಮತ್ತೂಂದು ಸಂಭಾವ್ಯ ಸಚಿವರ ಪಟ್ಟಿಯನ್ನು ರಾಜ್ಯ ನಾಯಕರು ಸಿದಟಛಿªಪಡಿಸಿದ್ದಾರೆ. ರಾಹುಲ್ ಯಾವ ಪಟ್ಟಿಗೆ
ಒಪ್ಪಿಗೆ ನೀಡುತ್ತಾರೆಯೋ ಅವರಿಗೆ ಸಂಪುಟದಲ್ಲಿ ಸಚಿವರಾಗುವ ಭಾಗ್ಯ ದೊರೆಯಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಮೊದಲ ಹಂತದಲ್ಲಿ 15 ರಿಂದ 18 ಖಾತೆ ಭರ್ತಿ ಮಾಡಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆಂದು ತಿಳಿದು ಬಂದಿದ್ದು, ಕೆ.ಜೆ.ಜಾರ್ಜ್, ಡಿ.ಕೆ.ಶಿವಕುಮಾರ್, ಶಾಮನೂರು ಶಿವಶಂಕರಪ್ಪ, ಜಮೀರ್ ಅಹಮದ್ ಅಥವಾ ರೋಷನ್ಬೇಗ್, ಸತೀಶ್ ಜಾರಕಿಹೊಳಿ, ರಾಜಶೇಖರ
ಪಾಟೀಲ್, ಶಿವಾನಂದ ಪಾಟೀಲ್, ಎಸ್.ಆರ್.ಪಾಟೀಲ್, ರಘು ಮೂರ್ತಿ, ಹನೂರು ನರೇಂದ್ರ, ರಘುಮೂರ್ತಿ, ದಿನೇಶ್ ಗುಂಡೂರಾವ್, ಶಿವಶಂಕರ ರೆಡ್ಡಿ, ರೂಪಾ ಶಶಿಧರ್, ಸಿ.ಎಸ್.ಶಿವಳ್ಳಿ ಅಥವಾ ಎಂಟಿಬಿ ನಾಗರಾಜ್, ಪ್ರಿಯಾಂಕ್ ಖರ್ಗೆ, ನಾಗೇಂದ್ರ ಅಥವಾ ತುಕಾರಾಮ್, ಪಕ್ಷೇತರ ಶಾಸಕ
ಆರ್.ಶಂಕರ್, ರಹೀಂ ಖಾನ್ ಅಥವಾ ಯು.ಟಿ. ಖಾದರ್ ಅವರು ಮೊದಲ ಹಂತದಲ್ಲಿ ಸಂಪುಟ ಸೇರುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಉನ್ನತ ಮೂಲಗಳು ತಿಳಿಸಿವೆ.
ಒಂದು ವೇಳೆ ಎಚ್.ಕೆ. ಪಾಟೀಲ್, ಆರ್.ವಿ.ದೇಶಪಾಂಡೆ, ರಾಮಲಿಂಗಾ ರೆಡ್ಡಿ ಹಾಗೂ ಎಂ.ಬಿ.ಪಾಟೀಲರಿಗೂ ಸಂಪುಟ ಸೇರ್ಪಡೆಗೆ ಅವಕಾಶ ನೀಡಿದರೆ, ಶಿವಾನಂದ ಪಾಟೀಲ್, ದಿನೇಶ್ ಗುಂಡೂರಾವ್ ಸೇರಿ ನಾಲ್ವರು ಯುವ ಶಾಸಕರು ಸಂಪುಟ ಸೇರುವ ಅವಕಾಶ ವಂಚಿತರಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಈ ನಡುವೆ, ಬೆಂಗಳೂರಿನ ಶಾಸಕರಿಗೆ ಹೆಚ್ಚಿನ ಸಚಿವ ಸ್ಥಾನ ನೀಡಬೇಕೆನ್ನುವ ಕುರಿತಂತೆ ನಗರ ಶಾಸಕರು ಗೌಪ್ಯ ಸಭೆ ನಡೆಸಿ ರಾಜ್ಯ ನಾಯಕರ ಮೇಲೆ ಒತ್ತಡ ಹೇರಲು ತೀರ್ಮಾನಿಸಿದ್ದಾರೆಂದು ಹೇಳಲಾಗುತ್ತಿದೆ. ಕೃಷ್ಣ ಬೈರೇಗೌಡಗೆ ಸಚಿವ ಸ್ಥಾನ ತಪ್ಪಿದರೆ, ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನಾದರೂ ನೀಡಬೇಕೆಂಬ ಬೇಡಿಕೆಯೂ ಆರಂಭವಾಗಿದೆ.
ಈ ಮಧ್ಯೆ, ಖಾತೆ ಹಂಚಿಕೆ ಗೊಂದಲದ ನಂತರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ದೆಹಲಿಗೆ ತೆರಳಿದ್ದು, ಹೈಕಮಾಂಡ್ ನಾಯಕರೊಂದಿಗೆ ಚರ್ಚಿಸಿ, ಮಂಗಳವಾರ ಸಂಭಾವ್ಯ ಸಚಿವರ ಪಟ್ಟಿಯೊಂದಿಗೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆಂದು ತಿಳಿದು ಬಂದಿದೆ.