ಸಂಕಲ್ಪಕ್ಕೆ ಜತೆಗೂಡದ ಎರಡು ಕೈ!
Team Udayavani, Jan 12, 2021, 5:20 AM IST
ಬೆಂಗಳೂರು, ಜ. 11: “ಸಂಕಲ್ಪ’ ಸಮಾವೇಶದ ಮೂಲಕ ತಳಮಟ್ಟದಿಂದ ಪಕ್ಷ ಸಂಘಟಿಸಲು ಕಾಂಗ್ರೆಸ್ ಯೋಜಿಸುತ್ತಿರುವ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ “ನಾನೊಂದು ತೀರ- ನೀನೊಂದು ತೀರ’ ಎಂಬಂತಾಗಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.
ಕೆಪಿಸಿಸಿ ಅಧ್ಯಕ್ಷ ಮತ್ತು ಶಾಸಕಾಂಗ ಪಕ್ಷದ ನಾಯಕರು ಸಮನ್ವಯದಿಂದ ಇರ ಬೇಕು ಎಂದು ಹೈಕಮಾಂಡ್ ಹೇಳಿದೆ. ಆದರೆ ಸಮಾಲೋಚನೆ, ಹೋರಾಟ ಮತ್ತು ಕಾರ್ಯಕ್ರಮಗಳ ಆಯೋಜನೆ ವಿಚಾರದಲ್ಲಿ ಸಮನ್ವಯ ಇದ್ದಂತಿಲ್ಲ.
ಪಕ್ಷದ ಇತರ ನಾಯಕರು ಕೂಡ ಸಂಕಲ್ಪ ಸಮಾವೇಶಗಳಲ್ಲಿ ಪ್ರಾರಂಭ ದಲ್ಲೇ ನಮಗೆ ಮಾತನಾಡಲು ಅವಕಾಶ ಸಿಗುತ್ತಿಲ್ಲ. ಕೊನೆಯಲ್ಲಿ ನಮ್ಮ ಮಾತು ಕೇಳಿಸಿಕೊಳ್ಳುವ ತಾಳ್ಮೆ ಯಾರಿಗೂ ಇರುವುದಿಲ್ಲ ಎನ್ನುತ್ತಿದ್ದಾರೆ.ಘಿ
ಆ ತೀರ-ಈ ತೀರ: ಕೆಲವು ಉದಾಹರಣೆ :
- ಕೇಂದ್ರ – ರಾಜ್ಯ ಸರಕಾರಗಳ ರೈತ ವಿರೋಧಿ ಕಾಯ್ದೆ ಕುರಿತು ಸಿದ್ದರಾಮಯ್ಯ ನಿವಾಸದಲ್ಲಿ ರವಿವಾರ ಕಿರು ಹೊತ್ತಗೆ ಬಿಡುಗಡೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿ.ಗೆ ಆಹ್ವಾನ ಇರಲಿಲ್ಲ.
- ಸಂಕಲ್ಪ ಸಮಾವೇಶ ಕುರಿತು ಬ್ಲಾಕ್ ಹಾಗೂ ಜಿಲ್ಲಾಧ್ಯಕ್ಷರ ಜತೆ ಡಿ.29 ರಂದು ಕೆಪಿಸಿಸಿ ಕಚೇರಿಯಲ್ಲಿ ಡಿ.ಕೆ.ಶಿವಕುಮಾರ್ ನಡೆಸಿದ ವೀಡಿಯೋ ಕಾನ್ಫರೆನ್ಸ್ನಲ್ಲಿ ಸಿದ್ದರಾಮಯ್ಯ ಪಾಲ್ಗೊಂಡಿರಲಿಲ್ಲ.
- ಡಿ ನೋಟಿಫಿಕೇಷನ್ ಪ್ರಕರಣ ವಿಚಾರದಲ್ಲಿ ಸಿಎಂ ಬಿಎಸ್ವೈ ರಾಜೀನಾಮೆಗೆ ಒತ್ತಾಯಿಸಲು ಸಿದ್ದರಾಮಯ್ಯ ವಿಧಾನಸೌಧದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಡಿ.ಕೆ.ಶಿ. ಇದ್ದರೂ ಮಾತು ಆಡಲಿಲ್ಲ.
- ಸಂಕಲ್ಪ ಸಮಾವೇಶಗಳಲ್ಲಿ ಸಿದ್ದರಾಮಯ್ಯ ಕೇವಲ “ಭಾಷಣ’ಕ್ಕೆ ಸೀಮಿತರಾದಂತಿದೆ. ಸಂಕಲ್ಪ ಸಮಾವೇಶಗಳ ಕೊನೆಯಲ್ಲಿ ತನಗೆ ಭಾಷಣಕ್ಕೆ ಅವಕಾಶ ಕೊಡುತ್ತಿರುವ ಬಗ್ಗೆ ಅವರು ಮುನಿಸಿಕೊಂಡಿದ್ದಾರೆ.