ಧಾರವಾಡದ ಯುವಕನಿಗೆ ಸೋಂಕು ದೃಢ
Team Udayavani, Mar 23, 2020, 3:06 AM IST
ಧಾರವಾಡ: ಆಸ್ಟ್ರೇಲಿಯಾ, ದುಬೈ, ಮಸ್ಕತ್ ಹಾಗೂ ಗೋವಾ ಮೂಲಕ ನಗರಕ್ಕೆ ಆಗಮಿಸಿದ್ದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ತಗುಲಿರುವುದು ಪ್ರಯೋಗಾಲಯ ವರದಿಯಿಂದ ಧೃಢಪಟ್ಟಿದೆ. ಇಲ್ಲಿನ ಹೊಸ ಯಲ್ಲಾಪೂರ ಪ್ರದೇಶದ ನಿವಾಸಿಯಾಗಿರುವ ಈತ ಮಾ.12ರಂದು ವಿದೇಶ ಪ್ರವಾಸದಿಂದ ಮರಳಿದ್ದರು.
ಶಂಕಿತ ಕೋವಿಡ್-19 ರೋಗ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಮಾ.18ರಂದು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಅದೇ ದಿನ ಅವರ ಗಂಟಲು ಮತ್ತು ಮೂಗಿನ ದ್ರವದ ಮಾದರಿಯನ್ನು ತಪಾಸಣೆಗಾಗಿ ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು.
ಇದೀಗ ಪ್ರಯೋಗಾಲಯ ವರದಿ ಕೋವಿಡ್-19 ಪಾಸಿಟಿವ್ ಎಂಬುದಾಗಿ ಬಂದಿದೆ. ತಕ್ಷಣವೇ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಹೊಸಯಲ್ಲಾಪುರ ಸುತ್ತಮುತ್ತ ಕಂಟೈನಮೆಂಟ್ ಪ್ರದೇಶ ಘೋಷಣೆ ಮಾಡಿದೆ. ಅಲ್ಲಿಂದ 3 ಕಿ.ಮೀ. ವ್ಯಾಪ್ತಿಯಲ್ಲಿ ಸಾರ್ವಜನಿಕರ ಆಗಮನ, ನಿರ್ಗಮನ ನಿರ್ಬಂ ಧಿಸಲಾಗಿದೆ. ಹುಬ್ಬಳ್ಳಿಯ ಕಿಮ್ಸ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹೊಸಯಲ್ಲಾಪೂರದಲ್ಲಿ ಆತಂಕ: 33 ವರ್ಷದ ಯುವಕನಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದರಿಂದ ಧಾರವಾಡದ ಜನತೆ ಆತಂಕಕ್ಕೊಳಗಾಗಿದ್ದಾರೆ. ಹೊಸ ಯಲ್ಲಾಪೂರ ಅತ್ಯಂತ ಜನನಿಬಿಡವಾಗಿದ್ದು, ಮಾರುಕಟ್ಟೆಗೆ ಹತ್ತಿರದ ಪ್ರದೇಶವಾಗಿದೆ. ಅದೂ ಅಲ್ಲದೇ ಸೋಂಕು ತಗುಲಿದ ವ್ಯಕ್ತಿ ಮಾ.12 ರಿಂದ 18ರವರೆಗೂ ಧಾರವಾಡ ನಗರದಲ್ಲಿ ಸಂಚರಿಸಿದ್ದ ಎನ್ನಲಾಗಿದೆ.