ಪ್ರವಾಹದ ಹಿನ್ನೆಲೆ, ಸಾಲ ಮರುಪಾವತಿ ಅವಧಿ ವಿಸ್ತರಣೆ
Team Udayavani, Aug 31, 2019, 3:00 AM IST
ಬೆಂಗಳೂರು: ರಾಜ್ಯದಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ರೈತರ ಬೆಳೆಸಾಲ, ಮನೆ ಸಾಲ, ಶೈಕ್ಷಣಿಕ ಸಾಲ ಮರುಪಾವತಿ ಅವಧಿಯನ್ನು ಒಂದು ವರ್ಷ ವಿಸ್ತರಣೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ನೇತೃತ್ವದಲ್ಲಿ ಶುಕ್ರವಾರ ನಡೆದ ರಾಜ್ಯ ಮಟ್ಟದ ಬ್ಯಾಂಕರ್ಸ್ಗಳ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ರಾಜ್ಯದಲ್ಲಿ ಪ್ರವಾಹದಿಂದಾಗಿ 8.71 ಲಕ್ಷ ಹೆಕ್ಟೇರ್ ಕೃಷಿ, ತೋಟಗಾರಿಕೆ, ರೇಷ್ಮೆ ಕೃಷಿ ಹಾನಿಯಾಗಿದ್ದು, ರೈತರು ಪಡೆದ ಸಾಲ ಮರುಪಾವತಿ ಮಾಡದಂತಹ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ರೈತರು ಪಡೆದಿರುವ ಅಲ್ಪಾವಧಿ ಕೃಷಿ ಸಾಲವನ್ನು ಮಧ್ಯಮಾವಧಿ ಸಾಲವನ್ನಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ. 2019 ರ ಜುಲೈ 31 ರೊಳಗೆ ಸಾಲ ಮರುಪಾವತಿ ಮಾಡಿರದಿದ್ದರೆ, ಅಂತಹ ರೈತರ ಸಾಲ ಮರುಪಾವತಿ ಅವಧಿಯನ್ನು ಒಂದು ವರ್ಷದ ಅವಧಿ ವಿಸ್ತರಣೆ ಮಾಡಲು ತೀರ್ಮಾನಿಸಲಾಗಿದೆ. ಅಗತ್ಯ ಬಿದ್ದರೆ 18 ತಿಂಗಳಿಗೆ ವಿಸ್ತರಿಸಲು ಸೂಚಿಸಲಾಗಿದೆ.
ಅಲ್ಲದೇ ರೈತರಿಗೆ ಆರ್ಬಿಐ ನಿಯಮಗಳ ಪ್ರಕಾರ ರೈತರ ಮರು ಪಾವತಿ ಮಾಡುವ ಶಕ್ತಾನುಸಾರ ಹೊಸ ಸಾಲ ನೀಡಬೇಕು. ಪ್ರವಾಹದಲ್ಲಿ ಮನೆ ಕಳೆದು ಕೊಂಡ ಸಾರ್ವಜನಿಕರು ಗೃಹ ಸಾಲ ಪಡೆದಿದ್ದರೆ, ಅವರ ಸಾಲವನ್ನು ಮರು ಹೊಂದಾಣಿಕೆ ಮಾಡುವುದು. ಒಂದು ವರ್ಷ ಸಾಲ ಮರುಪಾವತಿಗೆ ಅವಧಿ ವಿಸ್ತರಿಸಲು ತೀರ್ಮಾನಿಸಲಾಗಿದೆ.
ಸಾರ್ವಜನಿಕರ ಆಸ್ತಿಪಾಸ್ತಿ ಹಾನಿಯಾಗಿದ್ದರೆ, ಅಂತವರ ಸಾಲ ಮರುಪಾವತಿ ಅವಧಿಯನ್ನು ಐದು ವರ್ಷದವರೆಗೂ ವಿಸ್ತರಿಸಲು ಅವಕಾಶ ಕಲ್ಪಿಸಲಾಗಿದೆ. ಸಣ್ಣ ಮತ್ತು ಅತಿ ಸಣ್ಣ ಉದ್ಯಮಗಳು ನಷ್ಟಕ್ಕೊಳಗಾಗಿದ್ದರೆ, ಅವರ ಸಾಲ ಮರುಪಾವತಿ ಅವಧಿಯನ್ನು ಆರು ತಿಂಗಳು ವಿಸ್ತರಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.