ಕಾರು ಬಹುಮಾನ ಬಂದಿದೆ ಎಂದು ವಂಚನೆ
Team Udayavani, Jul 17, 2020, 10:59 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ತಮ್ಮ ಹೆಸರಿಗೆ ಕಾರು ಬಹುಮಾನವಾಗಿ ಬಂದಿರುವುದಾಗಿ ವಿದ್ಯಾರ್ಥಿಗೆ ಸಂದೇಶ ಕಳುಹಿಸಿದ ಸೈಬರ್ ಕಳ್ಳರು, ಅವರ ಖಾತೆಯಿಂದ 46 ಸಾವಿರ ರೂ. ಪಡೆದು ವಂಚಿಸಿದ್ದಾರೆ. ಶಾಂತಿನಗರ ನಿವಾಸಿ ಚಂದ್ರಶೇಖರ್ ವಂಚನೆಗೊಳಗಾದ ವಿದ್ಯಾರ್ಥಿ. ಈತ ಕೊಟ್ಟ ದೂರಿನ ಮೇರೆಗೆ ನಿತೀಶ್ ಕುಮಾರ್ ಎಂಬವನ ವಿರುದ್ಧ ಕೇಂದ್ರ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿ ಮೊಬೈಲ್ ನಂಬರ್ಗೆ 16 ಲಕ್ಷ ರೂ. ಮೌಲ್ಯದ ಕಾರು ಗೆದ್ದಿರುವುದಾಗಿ ಸಂದೇಶ ಬಂದಿತ್ತು. ಅದನ್ನು ನಂಬಿದ ಚಂದ್ರಶೇಖರ್, ಅದರಲ್ಲಿದ್ದ ನಂಬರ್ಗೆ ಕರೆ ಮಾಡಿ ವಿಚಾರಿಸಿದಾಗ ನಿತೀಶ್ ಎಂಬಾತ ಮಾತನಾಡಿದ್ದ. ತಮ್ಮ ಹೆಸರಿಗೆ ಬಹುಮಾನ ಬಂದಿರುವುದು ನಿಜ. ಕಾರನ್ನು ಪಡೆದುಕೊಳ್ಳಲು ನೋಂದಣಿ ಶುಲ್ಕ ಪಾವತಿಸಬೇಕು ಎಂದಿದ್ದರು. ಅದನ್ನು ನಂಬಿ ಮೊದಲಿಗೆ 8,500 ರೂ. ಆನ್ಲೈನ್ ಮೂಲಕ ಪಾವತಿಸಿದ್ದಾರೆ. ಅನಂತರ ಕಾರು ವಿಮೆಗೆಂದು 22 ಸಾವಿರ ರೂ. ಪಡೆದುಕೊಂಡಿದ್ದಾರೆ.
ಕೆಲವು ಹೊತ್ತಿನ ಬಳಿಕ ಕರೆ ಮಾಡಿದ ಆರೋಪಿಗಳು, ಸಾರಿಗೆ ವೆಚ್ಚ 15 ಸಾವಿರ ರೂ. ಪಾವತಿಸಲು ಸೂಚಿಸಿದ್ದಾರೆ. ಆಗ ಎಚ್ಚೆತ್ತ ಚಂದ್ರಶೇಖರ್, ಹಣ ಸಂದಾಯ ಮಾಡಲು ನಿರಾಕರಿಸಿದ್ದು, ಬಹುಮಾನ ಬೇಡವೆಂದು ಹೇಳಿದ್ದಾರೆ. ಆದರೆ ಆರೋಪಿಗಳು ಮತ್ತೂಮ್ಮೆ ಕರೆ ಮಾಡಿ ತಮ್ಮ ಬಹುಮಾನ ರದ್ದುಗೊಳಿಸಲು ಪ್ರಕ್ರಿಯೆ ಶುಲ್ಕ ಎಂದು 15,500 ರೂ. ಕೊಡಲೇಬೇಕೆಂದು ಹೇಳಿ ಒಟ್ಟು 46 ಸಾವಿರ ರೂ. ಪಡೆದು ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.