ಪಂಪನಿಂದ ಚಂಪಾವರೆಗೂ ರಾಜಕೀಯ ನಂಟು
Team Udayavani, Nov 26, 2017, 11:46 AM IST
“ಮಾತಾಡುವುದು ನನ್ನ ಕೆಲಸ, ಅವರು ಏನು ವಾಪಸು ಹೇಳ್ತಾರೆ, ಅದು ಅವರಿಗೆ ಬಿಟ್ಟಿದ್ದು. ಇಡೀ ಕನ್ನಡ ಸಾಹಿತ್ಯದ ಚರಿತ್ರೆ ತೆಗೆದುಕೊಂಡರೆ, ರಾಜಕೀಯ ಬಿಟ್ಟು ಸಾಹಿತ್ಯ ಎಂದೂ ದೂರವುಳಿಯಲೇ ಇಲ್ಲ. ಪಂಪ ನಿಂದ ಹಿಡಿದು ಈ ಚಂಪಾ ವರೆಗೆ ಎಲ್ಲ ಕಾಲಘಟ್ಟದಲ್ಲೂ ಎಲ್ಲರೂ ಅದನ್ನು ಪ್ರಕಟಿಸಿದ್ದಾರೆ. ರಾಜಕೀಯವೆಂದರೆ, ಅದು ಸಾಮಾಜಿಕ ವಿದ್ಯಮಾನವಷ್ಟೇ. ಅದು ರಾಜಕೀಯ ಮಾಡುವುದು ಅಂತಲ್ಲ.
ಸಾಹಿತ್ಯ ಇರಲಿ, ಕಲೆ ಇರಲಿ, ಸಂಗೀತವಿರಲಿ… ಏನೇ ಇದ್ದರೂ ಅದಕ್ಕೆ ರಾಜಕೀಯದ ಸಂಬಂಧ ಇದ್ದೇ ಇರುತ್ತದೆ ಎನ್ನುವುದು ಪ್ಲೇಟೋ ಕಾಲದಿಂದ ನಡೆದುಬಂದ ನೀತಿ. ‘ಉದಯವಾಣಿ’ ಜತೆ ವಿಶೇಷ ಮಾತುಕತೆಗೆ ಸಿಕ್ಕ ಚಂಪಾ, ತಮ್ಮ ಅಧ್ಯಕ್ಷೀಯ ಭಾಷಣ ದಿಂದಾಗಿ ನಾಡಿನಲ್ಲಾಗುತ್ತಿರುವ ಬಿಸಿ ಚರ್ಚೆ ಕುರಿತು ನಂತರ ಮಾತಾದರು.ಅದರ ಪುಟ್ಟ ನೋಟವಿದು…
* ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಘನಗಂಭೀರವಾಗಿ ಮಾತಾಡಬೇಕು, ನಾಡು-ನುಡಿಯ ಸಮಸ್ತ ವಿಚಾರ ಧಾರೆಗಳನ್ನು ಒಳಗೊಂಡಂತೆ ಅಭಿಪ್ರಾಯ ಮಂಡಿಸಬೇಕು. ಅಧ್ಯಕ್ಷ ಸ್ಥಾನ ಅಲಂಕರಿಸಿ ಯಾವುದೋ ಬದಿಗೆ ವಾಲುವುದು ಸರೀನಾ?
ಅಧ್ಯಕ್ಷ ಸ್ಥಾನ, ಅಲ್ಲಿ ಕೂಡ್ರೋನು ಒಬ್ಬ ವ್ಯಕ್ತಿ ಹೌದೋ ಅಲ್ಲೋ… ಆ ವ್ಯಕ್ತಿಗೆ ಅವನದ್ದೇ ಆದ ವ್ಯಕ್ತಿತ್ವ ಇರ್ತದ. ಅವನದ್ದೇ ಆದಂಥ ಒಲವು-ನಿಲುವು ಇರ್ತದ.ಅದನ್ನ ಅಂವ ಪ್ರಾಮಾಣಿಕವಾಗಿ ಹೇಳ್ತಾನ ಅಷ್ಟೇ. ಮುಂದಿನ ಸಲ ಅಧ್ಯಕ್ಷರಾಗಿ ಬರೋರು ಬೇರೆ ವಿಚಾರ ಧಾರೆಗೆ ಸೇರಿದವರು ಇರಬಹುದು. ಇಷ್ಟೇ ಅದು, ಬಹಳ ಸರಳ ಐತಿ.
* ಒಂದು ಸರ್ಕಾರ ಹಣ ಕೊಡೋದು ಸರಿ. ಈಗೀಗ ಹಣ ಹೆಚ್ಚಾಗುತ್ತಾ ಹೋದ್ಹಂಗೆ, ಸಮ್ಮೇಳನದ ಉದ್ದೇಶ ನೇರವಾಗಿ ಸರ್ಕಾರದ ನಿಯಂತ್ರಣಕ್ಕೆ ಹೋಗುತ್ತಾ ಇದೆ ಎಂಬ ಆತಂಕವಿದೆ. ಕಸಾಪಕ್ಕಿಂತ ಹೆಚ್ಚಾಗಿ ಸರ್ಕಾರವೇ ಸಮ್ಮೇಳನ ನಡೆಸುತ್ತಿರು ವಂತಿದೆ. ನೀವು ಕಸಾಪ ಅಧ್ಯಕ್ಷರಾದಾಗ ಡಿಸಿಎಂ ಆಗಿದ್ದ ಯಡಿಯೂ ರಪ್ಪಅವರ ನಿಲುವಿನ ವಿರುದ್ಧ ನಡೆದಂತೆ ಈಗಿನ ಕಸಾಪ ಏಕೆ ನಿಲುವು ತಳೆಯುತ್ತಿಲ್ಲ?ಹೀಗೇ ಆದರೆ, ಕಸಾಪ ಭವಿಷ್ಯ?
ವರ್ತಮಾನ ನಾನು ಕಾಣುತ್ತಿರುವ ಅನುಭವ. ನಾಳೆ ಏನಾಗುತ್ತೋ ಅಂತ ಹೇಗೆ ಹೇಳಲಿ, ಹೌದಲ್ರಿ. ಅದು ಜ್ಯೋತಿಷ್ಯರ ಕೆಲಸ. ಅಂದು ನಾನು ನಿಲುವು ತಗೊಂಡೆ ನಿಜ. ಬೇರೆಯವರ ನಿಲುವು ಹಿಂಗೇ ಇಬೇìಕು ಅಂತ ಹೇಳ್ಳೋಅಧಿಕಾರ ನನಗೆ ಯಾರು ಕೊಟ್ಟಾರ? ಕಸಾಪ ಸಾರ್ವಜನಿಕ ಸಂಸ್ಥೆ, ಯಾವುದೇ ವ್ಯಕ್ತಿ ಸ್ಪರ್ಧಿಸಿ ಇಲ್ಲಿ ಅಧ್ಯಕ್ಷನಾಗಬಹುದು. ಬಂದವರಿಗೆ ಅವರದ್ದೇ ಆದ ಅಸ್ತಿತ್ವ, ಮಿತಿ ಇರ್ತದ. ಏಕೀಕರಣ ಪೂರ್ವದಲ್ಲಿ ಆಗಿನ ಮಹಾರಾಜರು ಅನುದಾನ ನೀಡಿದರು. ನಂತರ ಬಂದ ಸರ್ಕಾರಗಳು, ಯಾವುದೇ ಪಕ್ಷಗಳು, ಬೇರೆ ಬೇರೆ ರೀತಿಯಿಂದ ಪೋಷಿಸಿಕೊಂಡು ಬಂದವು. ಅದು ಅವರ ಕರ್ತವ್ಯ. ಕನ್ನಡಕ್ಕೆ ದುಡಿಯುವ ಸಂಸ್ಥೆ. ಅದರ ಸ್ವಾಯತ್ತತೆ ಒಳಗೆ ಕೈ ಹಾಕುವ ಹಕ್ಕು ಸರ್ಕಾರಕ್ಕಿಲ್ಲ.
* ಕಳೆದ ಸಲ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷದ ಹಾದಿ ಹಿಡಿದಿದ್ದೀರಿ. ಮುಂದಿನ ಚುನಾವಣೆಯಲ್ಲಿ ಚಂಪಾ ಪಾತ್ರ…?
ಪ್ರಾಮಾಣಿಕ ಪ್ರಾದೇಶಿಕ ಪಕ್ಷವಿದ್ದರೆ, ಅದು ಸೆಕ್ಯುಲರ್ ನೀತಿ ಅನುಸರಿಸುತ್ತಿದ್ದರೆ, ನಾನು ಅವರ ಸೈಡು. ಅದರಲ್ಲಿ ನಾನು ಸ್ಪಷ್ಟವಿದ್ದೇನೆ. ಸೆಕ್ಯುಲರ್ ಎಂದು ಹೇಳಿ ಕೊಳ್ಳುವ ಪಕ್ಷಕ್ಕೆ ಆಯಾ ಪ್ರದೇಶದ ಅಜೆಂಡಾ ಬೇಕು. ಅವರ ಪ್ರಾದೇಶಿಕ ನಿಲುವು, ಕಾರ್ಯಕ್ರಮ, ಆಲೋಚನೆಗಳನ್ನು ಪ್ರಣಾಳಿಕೆಯಲ್ಲಿ ಸ್ಪ$ಷ್ಟವಾಗಿ ನಮೂದಿಸಬೇಕು. ಅವರ ಮಾತು ಎಷ್ಟು ಪ್ರಾಮಾಣಿಕ ಅನ್ನೋದನ್ನು ನೋಡಿಕೊಂಡು ನಾನು ಆ ಪಕ್ಷವನ್ನು ಆಯ್ಕೆ ಮಾಡಿಕೊಳ್ಳುವೆ.
* ನಿಮ್ಮ ನಿಲುವು ಕಾಂಗ್ರೆಸ್ಗೆ ಹತ್ತಿರವಾಗಿದ್ಹಂಗೆ ಇತ್ತು ಎಂಬುದನ್ನು ಅನೇಕರು ಅಂದುಕೊಳ್ತಿದ್ದಾರೆ?
ಅಂದುಕೊಳ್ಳೋದು ಅವರಿಗೆ ಬಿಟ್ಟಿದ್ದು. ಅದಕ್ಕೆ ನಾನೇನು ಮಾಡಕ್ಕಾಗ್ತದಿ? ನನಗೆ ಬಂದ ಸರ್ವೆಗಳ ಮಾಹಿತಿ ಪ್ರಕಾರ, ಕರ್ನಾಟಕದಲ್ಲಿ ಯಾರಿಗೂ ಸಂಪೂರ್ಣವಾಗಿ ಮೆಜಾರಿಟಿ ಸಿಗೋದಿಲ್ಲ. ಸ್ವಂತ ಬಲದ ಮೇಲೆ ಸರ್ಕಾರ ರಚನೆಯ ಸಾಧ್ಯತೆಗಳು ಕಮ್ಮಿ ಐತಿ ಅಂತವೆ ಮಾಧ್ಯಮಗಳು. ಜಾತ್ಯತೀತ, ಪ್ರಾದೇಶಿಕ ನಿಲುವುಳ್ಳ ಪಕ್ಷಕ್ಕೆ ನನ್ನ ಒಲವೈತಿ. ಹಿಂದೆ ಕೆಜಿಪಿ ಹಿಂದೆ ಹೊರಟಾಗ,ಯಡಿಯೂರಪ್ಪನವರು ಸೆಕ್ಯುಲರ್ ಪ್ರಾದೇಶಿಕ ಪಕ್ಷ ಕಟ್ಟುತ್ತೇನೆಂದು ನನಗೆ ಆಶ್ವಾಸನೆ ಕೊಟ್ಟರು. ಆದರೆ, ಅದನ್ನು ಅವರು ಉಳಿಸಿಕೊಳ್ಳಲಿಲ್ಲ. ಹಾಗಾಗಿ, ಅವರ ಜತೆಗೆ ಹೋಗಲಿಕ್ಕೆ ಆಗಲಿಲ್ಲ.
ಧಾರವಾಡದಲ್ಲಿ ಮುಂದಿನ ಸಮ್ಮೇಳನ
ಮೈಸೂರು: ಮುಂದಿನ 84ನೇ ಸಾಹಿತ್ಯ ಸಮ್ಮೇಳನ ಬೇಂದ್ರೆ ನಾಡು, ಸಾಹಿತ್ಯಾಸಕ್ತರ ಸ್ವರ್ಗ ಧಾರವಾಡದಲ್ಲಿ ನಡೆಯಲಿದೆ ಎಂದು ಕಸಾಪ ಹೇಳಿದೆ. ಶನಿವಾರ ಕಸಾಪ ಅಧ್ಯಕ್ಷ ಮನು ಬಳಿಗಾರ್ ಮತ್ತು ಸಮ್ಮೇಳನಾಧ್ಯಕ್ಷ ಚಂಪಾ ಉಪಸ್ಥಿತಿಯಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಕನ್ನಡ ನಾಡು, ನುಡಿಯ ಏಳಿಗೆ ಬಗ್ಗೆ ಚರ್ಚೆ ನಡೆಯಬೇಕಿದ್ದ ಸಮ್ಮೇಳನದ ವೇದಿಕೆಯನ್ನು ಚಂಪಾ ಅವರು ರಾಜಕೀಯ ವೇದಿಕೆಯಾಗಿ ಬಳಸಿಕೊಂಡಿದ್ದು ದುರದೃಷ್ಟಕರ. ಮುಂದಿನ ದಿನಗಳಲ್ಲಿ ಈ ರೀತಿಯಾಗದಂತೆ ಎಚ್ಚರಿಕೆ ವಹಿಸುವುದು ಅಗತ್ಯ
-ಸಿ.ಟಿ.ರವಿ, ಬಿಜೆಪಿ ನಾಯಕ
ಚಂಪಾ ಅವರ ಅಧ್ಯಕ್ಷೀಯ ಮಾತುಗಳು ರಾಜಕೀಯ ಕಮಟಿನಿಂದ ಕೂಡಿವೆ. ಒಂದು ಪಕ್ಷದ ಪರವಾಗಿ ನಿಂತಿದ್ದು ಸಮ್ಮೇಳನದ ದೊಡ್ಡ ದುರಂತ. ವೈಯಕ್ತಿಕವಾಗಿ ನಾವು ಯಾವುದೇ ಪಕ್ಷದ ಪರ ಇದ್ದಿರಬಹುದು. ಆದರೆ, ಸಮ್ಮೇಳನದಲ್ಲಿ ಅದನ್ನು ಬಿಂಬಿಸಬಾರದು.
-ಗಿರಡ್ಡಿ ಗೋವಿಂದರಾಜು, ವಿಮರ್ಶಕ
* ಕೀರ್ತಿ ಕೋಲ್ಗಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು