ಪರಪ್ಪನ ಅಗ್ರಹಾರ ಜೈಲಲ್ಲೀಗ ಎಲ್ಲ ಬಿಗಿ
Team Udayavani, Jul 21, 2017, 7:00 AM IST
ಬೆಂಗಳೂರು: ಲಂಚ ಪಡೆದು ಕೈದಿಗಳಿಗೆ “ವಿಐಪಿ ಆತಿಥ್ಯ’ ನೀಡುವ ವಿಚಾರದಲ್ಲಿ ರಾಷ್ಟ್ರವ್ಯಾಪಿ ಸುದ್ದಿಯಾಗಿದ್ದ ಪರಪ್ಪನ ಅಗ್ರಹಾರ ಕೇಂದ್ರೀಯ ಕಾರಾಗೃಹದಲ್ಲಿ ಈಗ “ಫುಲ್ ಸ್ಟ್ರಿಕ್ಟ್’.
ಹೌದು, ಜೈಲಿನಲ್ಲೀಗ ಹೊರಗಡೆಯ ಊಟಕ್ಕೆ ಬ್ರೇಕ್. ನೋ ಬೀಡಿ, ಸಿಗರೆಟ್, ಗಾಂಜಾ. ಮೊಬೈಲ್ ಮಾತುಕತೆಗೆ ಅವಕಾಶವಿಲ್ಲ. ಕೈದಿಗಳ ಭೇಟಿಗೆ ಬೇಕಾ ಬಿಟ್ಟಿ ಅವಕಾಶವಿಲ್ಲ. ನಿಯಮಾವಳಿ ಬಿಟ್ಟು ಅನ್ಯ ಚಟುವಟಿಕೆಗಳೆಲ್ಲವೂ ಬಂದ್ ಆಗಿವೆ.
ಈ ಹಿಂದಿದ್ದ ಡಿಜಿಪಿ, ಡಿಐಜಿ ಹಾಗೂ ಜೈಲು ಅಧೀಕ್ಷಕರ ಸಾಮೂಹಿಕ ಎತ್ತಂಗಡಿ ಅನಂತರ ಹೊಸದಾಗಿ ಬಂದಿರುವ ಅಧಿಕಾರಿಗಳು ಇದೀಗ ಜೈಲಿನಲ್ಲಿ ಕಟ್ಟುನಿಟ್ಟಿನ ನಿಯಮಾವಳಿ ಪಾಲನೆಗೆ ಮುಂದಾಗಿದ್ದಾರೆ.
ದಿನಕರನ್ಗೆ ನೋ ಎಂಟ್ರಿ: ಗುರುವಾರ ಶಶಿಕಲಾ ಅವರನ್ನು ಭೇಟಿ ಮಾಡಲು ಬಂದ ದಿನಕರನ್ಗೂ ಇದರ ಬಿಸಿ ತಟ್ಟಿತಲ್ಲದೆ, ಭೇಟಿಗೆ ನಿರಾಕರಿಸಲಾಯಿತು. ಸಂಜೆ 4.30ರ ಸುಮಾರಿಗೆ ಬೆಂಬಲಿಗರ ಜತೆ ಬಂದಿದ್ದ ದಿನಕರನ್, ಶಶಿಕಲಾರ ಭೇಟಿ ಮಾಡಲು ಅವಕಾಶ ನೀಡುವಂತೆ ಜೈಲು ಅಧಿಕಾರಿಗಳ ಬಳಿ ಮನವಿ ಮಾಡಿದರು. ಸಂದರ್ಶಕರ ಭೇಟಿ ಅವಧಿ ಪೂರ್ಣಗೊಂಡಿರುವುದರಿಂದ ಇಂದು ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಜೈಲು ಸಿಬಂದಿ ಹೇಳಿದರು.
ಇನ್ನೂ ಮೂವರು ಅಧಿಕಾರಿಗಳ ವರ್ಗಾವಣೆ
ಬೆಂಗಳೂರು: ಡಿಜಿಪಿ-ಡಿಐಜಿ, ಪರಪ್ಪನ ಅಗ್ರಹಾರ ಜೈಲು ಮುಖ್ಯ ಅಧೀಕ್ಷಕ ಎತ್ತಂಗಡಿ ಬೆನ್ನಲ್ಲೇ ಎರಡನೇ ಹಂತದಲ್ಲಿ ಜೈಲು ಅಧೀಕ್ಷಕಿಯಾಗಿದ್ದ ಅನಿತಾ ರೈ ಅವರನ್ನು ಸಹ ವರ್ಗಾವಣೆ ಮಾಡಲಾಗಿದೆ. ಜತೆಗೆ ಧಾರವಾಡ ಮತ್ತು ಕಲಬುರಗಿ ಕಾರಾಗೃಹಗಳ ಇಬ್ಬರು ಅಧಿಕಾರಿಗಳನ್ನು ವರ್ಗಾಯಿಸಲಾಗಿದೆ.
ಪರಪ್ಪನ ಅಗ್ರಹಾರದ ಪ್ರಭಾರ ಮುಖ್ಯ ಜೈಲು ಅಧೀಕ್ಷಕಿ ಡಾ| ಅನಿತಾ ರೈ , ಕಲಬುರಗಿ ಕಾರಾಗೃಹದ ಮುಖ್ಯ ಜೈಲು ಅಧೀಕ್ಷಕ ಸೋಮಶೇಖರ್, ಧಾರವಾಡ ಕಾರಾಗೃಹದ ಜೈಲು ಅಧೀಕ್ಷಕ ರಮೇಶ್ ಕುಮಾರ್ ಅವರನ್ನು ಎತ್ತಂಗಡಿ ಮಾಡಲಾಗಿದೆ.
ಸೋಮಶೇಖರ್ ಅವರನ್ನು ಪರಪ್ಪನ ಅಗ್ರಹಾರ ಕಾರಾಗೃಹದ ಮುಖ್ಯ ಅಧೀಕ್ಷಕ ಹುದ್ದೆಗೆ, ರಮೇಶ್ಕುಮಾರ್ ಅವರನ್ನು ಅಧೀಕ್ಷಕ ಹುದ್ದೆಗೆ ವರ್ಗಾಯಿಸಲಾಗಿದೆ. ಅನಿತಾ ರೈ ಅವರನ್ನು ಧಾರವಾಡ ಜೈಲು ಅಧೀಕ್ಷಕಿ ಹುದ್ದೆಗೆ ನಿಯೋಜಿಸಲಾಗಿದೆ.