ಗೌರಿ ಹತ್ಯೆ ಪ್ರಕರಣ, ಮಾಜಿ ನಕ್ಸಲ್ ಮುಖಂಡರು ಹೇಳೋದೇನು?
Team Udayavani, Sep 11, 2017, 1:29 PM IST
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ತನಿಖೆಯ ದಿಕ್ಕು ತಪ್ಪಿಸಲಾಗುತ್ತಿದೆ. ಗೌರಿ ಹತ್ಯೆಯ ವಿಚಾರದಲ್ಲಿ ನಕ್ಸಲ್ ಮುಖಂಡ ವಿಕ್ರಂ ಗೌಡನನ್ನು ಸಿಲುಕಿಸುವ ಹುನ್ನಾರ ನಡೆಸಲಾಗುತ್ತಿದೆ. ಗೌರಿ ಹತ್ಯೆಯಲ್ಲಿ ನಕ್ಸಲೀಯರ ಪಾತ್ರವಿಲ್ಲ. ವೈಚಾರಿಕ ದ್ವೇಷ ಹೆಚ್ಚುತ್ತಿರುವ ಭಾಗವಾಗಿಯೇ ಗೌರಿ ಅವರನ್ನು ಹತ್ಯೆ ಮಾಡಲಾಗಿದ್ದು, ಸಂಘ ಪರಿವಾರದ ನೇರ ಪಾತ್ರವಿದೆ ಎಂದು ಮಾಜಿ ನಕ್ಸಲ್ ಮುಖಂಡರಾದ ಸಿರಿಮನೆ ನಾಗರಾಜ್ ಮತ್ತು ನೂರ್ ಶ್ರೀಧರ್ ಗಂಭೀರವಾಗಿ ಆರೋಪಿಸಿದ್ದಾರೆ.
ಸೋಮವಾರ ಗೌರಿ ಲಂಕೇಶ್ ಹತ್ಯೆ ಹಿಂದೆ ನಕ್ಸಲೀಯರ ಕೈವಾಡ ಇದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿರಿಮನೆ ಮತ್ತು ನೂರ್ ಶ್ರೀಧರ್, ವಿಕ್ರಂ ಗೌಡನ ಮೇಲೆ ಗೌರಿ ಲಂಕೇಶ್ ಹತ್ಯೆಯ ಗೂಬೆ ಕೂರಿಸಲಾಗುತ್ತಿದೆ. ವಿಕ್ರಂ ಗೌಡ ಆದಿವಾಸಿ, ಮುಗ್ಧ ಯುವಕ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಯಾವುದೇ ಕಾರಣಕ್ಕೂ ಗೌರಿ ಹತ್ಯೆಯಲ್ಲಿ ನಕ್ಸಲೀಯರ ಪಾತ್ರವಿಲ್ಲ, ನಕ್ಸಲ್ ಸಂಘಟನೆ ಮೇಲೆ ಆರೋಪ ಮಾಡುವ ಸಂಘ ಪರಿವಾರ ಕೂಡಾ ಶಿವಮೊಗ್ಗದಲ್ಲಿ ಗೌರಿ ಲಂಕೇಶ್ ಗೆ ಮಾತನಾಡಲು ಅವಕಾಶ ಕೊಟ್ಟಿಲ್ಲ ಎಂದು ಜಂಟಿಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.