ವಿಪತ್ತಿನ ಕಾಲವನ್ನು ಗೆದ್ದು ಬರುವ ದೃಢಸಂಕಲ್ಪ ಕಾರ್ಮಿಕರಲ್ಲಿ ಮನೆ ಮಾಡಲಿ: ಕುಮಾರಸ್ವಾಮಿ
Team Udayavani, May 1, 2020, 8:35 AM IST
ಬೆಂಗಳೂರು: ಇವತ್ತು ಮೇ ಒಂದು. ಕಾರ್ಮಿಕರ ದಿನ. ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ರಾಜ್ಯದ ಕಾರ್ಮಿಕರಿಗೆ ತಮ್ಮ ಟ್ವೀಟ್ ಮೂಲಕ ಶುಭಾಶಯ ಕೋರಿದ್ದಾರೆ.
ಕೋವಿಡ್-19 ಗಂಡಾಂತರಕಾರಿ ಪರಿಸ್ಥಿತಿಯಲ್ಲಿ ಕಾರ್ಮಿಕ ಬಂಧುಗಳ ಮೊಗದಲ್ಲಿ ನಗೆ ಮಾಸಿರುವುದು ವಾಸ್ತವ ಸತ್ಯ. ಕಂಡರಿಯದ ಈ ವಿಪತ್ತಿನ ಕಾಲವನ್ನು ಗೆದ್ದು ಬರುವ ದೃಢಸಂಕಲ್ಪ ಕಾರ್ಮಿಕರಲ್ಲಿ ಮನೆ ಮಾಡಲಿ ಎಂದು ಕುಮಾರಸ್ವಾಮಿಯವರು ಹಾರೈಸಿದ್ದಾರೆ.
ಸೋತಿರುವ ದುಡಿಯುವ ಕೈಗಳಿಗೆ ಹೊಸ ಚೈತನ್ಯ ಬರಲಿ. ಒಳ್ಳೆಯ ದಿನಗಳ ನಿರೀಕ್ಷೆಯಲ್ಲಿ ಈ ಬಾರಿಯ ಕಾರ್ಮಿಕ ದಿನಾಚರಣೆ ಎದುರುಗೊಳ್ಳೋಣ. ಕಾರ್ಮಿಕರ ಭವಿಷ್ಯದ ಆತಂಕ ದೂರವಾಗಲಿ. ಎಲ್ಲರಿಗೂ ಕಾರ್ಮಿಕ ದಿನಾಚರಣೆಯ ಶುಭಾಶಯಗಳು ಎಂದಿದ್ದಾರೆ.
ಕಾರ್ಮಿಕ ಪ್ರಭುತ್ವದ ಶುಭಯುಗದ ಕುರುಹಾಗಿ ಮೇ ತಿಂಗಳ ಮೊದಲ ದಿನದಂದು ಕಾರ್ಮಿಕ ದಿನಾಚರಣೆ ಆರಂಭಿಸಲಾಯಿತು. ಅಮೇರಿಕ, ಕೆನಡಾ, ಇಟಲಿ ದೇಶಗಳನ್ನು ಹೊರತುಪಡಿಸಿ ವಿಶ್ವದ ಬಹುತೇಕ ದೇಶಗಳಲ್ಲಿ ಮೇ ಒಂದರಂದು ಕಾರ್ಮಿಕ ದಿನಾಚರಣೆ ಆಚರಿಸಲಾಗುತ್ತಿದೆ. ಸರ್ಕಾರಿ ರಜಾ ದಿನವನ್ನೂ ಘೋಷಿಸಲಾಗಿದೆ. ಭಾರತದಲ್ಲಿ 1927ರ ನಂತರ ಈ ಆಚರಣೆ ಅರಂಭವಾಯಿತು.