ಆರೋಗ್ಯ ಇಲಾಖೆಗೆ “ಯಶಸ್ವಿನಿ’ ಸೇರ್ಪಡೆಗೆ ಈಶ್ವರಪ್ಪ ಆಕ್ಷೇಪ
Team Udayavani, Mar 23, 2017, 10:51 AM IST
ವಿಧಾನಪರಿಷತ್ತು: ಸಹಕಾರ ಇಲಾಖೆ ಮೂಲಕ ಜಾರಿಯಲ್ಲಿರುವ ಯಶಸ್ವಿನಿ ಯೋಜನೆಯನ್ನು ಯಾವುದೇ ಕಾರಣಕ್ಕೂ ಆರೋಗ್ಯ ಇಲಾಖೆಗೆ ಒಳಪಡಿಸಬಾರದು ಎಂದು ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದ್ದಾರೆ. ಬಜೆಟ್
ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು ಆರೋಗ್ಯ ಇಲಾಖೆಯಲ್ಲಿ ಜಾರಿಯಲ್ಲಿರುವ ಅನೇಕ ಅರೋಗ್ಯ ವಿಮಾ ಯೋಜನೆಗಳು, ವೈದ್ಯಕೀಯ ವೆಚ್ಚ ಮರುಪಾವತಿ ಯೋಜನೆಗಳು ಕುಲಗೆಟ್ಟು ಹೋಗಿವೆ.
ಆದರೆ, ಕಳೆದ 13 ವರ್ಷಗಳಿಂದ ಸಹಕಾರ ಇಲಾಖೆ ಮೂಲಕ ಜಾರಿಯಲ್ಲಿರುವ ಯಶಸ್ವಿನಿ ಯೋಜನೆ ಯಾವುದೇ ಗೊಂದಲ, ಅವ್ಯವಹಾರಗಳಿಲ್ಲದೇ ಯಶಸ್ವಿಯಾಗಿ ಅನುಷ್ಠಾನದಲ್ಲಿದೆ. ಹಾಗಾಗಿ ಈ ಯೋಜನೆಯನ್ನು ಆರೋಗ್ಯ ಇಲಾಖೆಗೆ ಒಳಪಡಿಸಬಾರದು ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ರಮೇಶ್ಕುಮಾರ್,
ಸಹಕಾರಿ ಸಂಘಗಳ ಸದಸ್ಯರ ಪೈಕಿ ವಂತಿಗೆ ಕಟ್ಟುವವರಿಗೆ ಮಾತ್ರ ಯಶಸ್ವಿನಿ ಯೋಜನೆ ಪ್ರಯೋಜನ ಸಿಗುತ್ತಿದೆ.
ವಂತಿಗೆ ಕಟ್ಟುವವರು, ಕಟ್ಟದೇ ಇರುವವರಿಗೂ ಸೌಲಭ್ಯ ಸಿಗಬೇಕು. ಈಗ ಗರಿಷ್ಠ ಮಿತಿ 2ಲಕ್ಷ ರೂ. ಆದರೆ, ಗರಿಷ್ಠ
ಮಿತಿ ತೆಗೆದು ಹಾಕಬೇಕು ಅನ್ನುವುದು ಸರ್ಕಾರದ ಉದ್ದೇಶ. ಆದರೆ, ಈ ವಿಚಾರದಲ್ಲಿ ಆತುರದ ತೀರ್ಮಾನ
ತೆಗೆದುಕೊಳ್ಳುವುದಿಲ್ಲ. ಎರಡೂ ಸದನಗಳ ಸದಸ್ಯರು, ಅಧಿಕಾರಿಗಳು, ತಜ್ಞರ ಸಭೆ ಕರೆದು ಚರ್ಚಿಸಿ ಮುಂದಿನ
ತೀರ್ಮಾನ ತೆಗೆದುಕೊಳ್ಳುವುದು ಎಂದು ಭರವಸೆ ನೀಡಿದರು.