Karnataka; ಮಲ ಹೊರುವ ಪದ್ಧತಿ ನಿಷೇಧವಿದ್ದರೂ ಜೀವಂತ: ಹೈಕೋರ್ಟ್ ತೀವ್ರ ಅತೃಪ್ತಿ
Team Udayavani, Jan 9, 2024, 12:29 AM IST
ಬೆಂಗಳೂರು: ಮಲ ಹೊರುವ ಪದ್ಧತಿಗೆ ನಿಷೇಧವಿದ್ದರೂ ಅದು ಜೀವಂತವಾಗಿದೆ. ಅಲ್ಲದೆ ತಪ್ಪಿತಸ್ಥ ಯಾರೊಬ್ಬರಿಗೂ ಶಿಕ್ಷೆ ಆಗಿಲ್ಲ. ಇದೊಂದು ರೀತಿ ನ್ಯಾಯದ ವಿಡಂಬನೆ, ಇಂದು ನಡೆಯುತ್ತಿರು ವುದನ್ನು ನೋಡಿದರೆ ನಮ್ಮ ಸಂವಿಧಾನ ನಿರ್ಮಾತೃಗಳು ಗೋರಿಗಳಲ್ಲಿ ಬೆವರು ತ್ತಾರೆ ಎಂದು ಹೈಕೋರ್ಟ್ ಹೇಳಿದೆ.
ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾ| ಪ್ರಸನ್ನ ಬಿ. ವರಾಲೆ ಹಾಗೂ ನ್ಯಾ| ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಸೋಮವಾರ ವಿಚಾರಣೆ ಬಂದಿತ್ತು.
ಮಲ ಹೊರುವುದನ್ನು ನಿಷೇಧಿಸಿ 2013ರಲ್ಲಿ ಕಾಯ್ದೆ ತಂದರೂ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡದ ಸರಕಾರದ ವಕೀಲರು ಹಾಗೂ ಸರಕಾರಿ ಅಭಿಯೋಜಕರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದೆ.