ಸಂತೃಪ್ತ ಗ್ರಾಹಕರೇ ಬ್ಯಾಂಕಿನ ಜೀವಾಳ: ಮಹಾಬಲೇಶ್ವರ
Team Udayavani, Apr 13, 2018, 12:07 PM IST
ಮಂಗಳೂರು: “ಸಂತೃಪ್ತ ಗ್ರಾಹಕರೇ ಬ್ಯಾಂಕಿನ ಜೀವಾಳ’ ಎಂದು ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್. ಅವರು ಹೇಳಿದರು. ಪ್ರಧಾನ ಕಚೇರಿಯಲ್ಲಿ ಆಯೋಜಿಸಿದ್ದ ಬ್ಯಾಂಕಿನ ಪ್ರಾದೇಶಿಕ ಕಚೇರಿಗಳ ಮುಖ್ಯಸ್ಥರು ಹಾಗೂ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, “ಕಳೆದ ವಿತ್ತೀಯ ವರ್ಷದಲ್ಲಿ ಕರ್ಣಾಟಕ ಬ್ಯಾಂಕಿಗೆ ದಾಖಲೆಯ 10 ಲಕ್ಷ ಹೊಸ ಗ್ರಾಹಕರು ಸೇರ್ಪಡೆಗೊಂಡಿದ್ದಾರೆ’ ಎಂದು ಹೇಳಿದರು.
ದೇಶದ ಬ್ಯಾಂಕಿಂಗ್ ರಂಗದಲ್ಲಿನ ಪ್ರಕ್ಷುಬ್ಧ ಪರಿಸ್ಥಿತಿ ಮಧ್ಯೆಯೂ ಗ್ರಾಹಕರ ಸಂಪೂರ್ಣ ಸಹಕಾರದೊಂದಿಗೆ ಕರ್ಣಾಟಕ ಬ್ಯಾಂಕ್ ಉತ್ತಮವಾದ ಸಾಧನೆ ಮಾಡಿದೆ. ಕಳೆದ ವರ್ಷ ಬ್ಯಾಂಕಿನ ವ್ಯವಹಾರವನ್ನು ಒಂದು ಲಕ್ಷ ಕೋಟಿ ರೂ.ಗಳ ಗಡಿ ದಾಟಿಸಿ ವರ್ಷಾಂತ್ಯಕ್ಕೆ ಒಂದು ಲಕ್ಷ ಹತ್ತು ಸಾವಿರ ಕೋಟಿ ರೂ.ಗೂ ಮಿಕ್ಕಿ ವ್ಯವಹಾರವನ್ನು ಮಾಡಿರುವುದು ಬ್ಯಾಂಕಿನ ಸಾಧನೆಯ ಮೈಲಿಗಲ್ಲು. ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಬೆಳವಣಿಗೆ ಶೇ. 8ರಷ್ಟಿದ್ದಾಗ ಕರ್ಣಾಟಕ ಬ್ಯಾಂಕ್ ಶೇ. 17.82ರಷ್ಟು ವೃದ್ಧಿಯನ್ನು ದಾಖಲಿಸಿದೆ ಎಂದರು.
ಮುಂಗಡದ ವ್ಯವಹಾರ ಶೇ. 28.54 ತಲುಪಿರುವುದು ಆಶಾದಾಯಕ. ಇದು ಸಿಬ್ಬಂದಿಗಳ ಸಾಮರ್ಥ್ಯದ ಧೊತಕ. ಇಂತಹ ಯಶಸ್ಸನ್ನು ನಿರಂತರವಾಗಿ ಸಾಧಿಸಬೇಕು. ನೈತಿಕ ಮೌಲ್ಯಗಳ ಚೌಕಟ್ಟನ್ನು ಮೀರದೆ ಅಭಿವೃದ್ಧಿ ಹೊಂದಬೇಕು. ತಂತ್ರಜ್ಞಾನ ಆಧಾರಿತ ಅನೇಕ ಪರಿವರ್ತನೆಗಳನ್ನು ಮೈಗೂಡಿಸಿಕೊಳ್ಳಬೇಕು. ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುವುದರ ಮೂಲಕ ಪ್ರಸ್ತುತ ವರ್ಷದ ವ್ಯವಹಾರದ ಗುರಿ ಒಂದು ಲಕ್ಷ ಮೂವತ್ತು ಸಾವಿರ ಕೋಟಿ ರೂ. ತಲುಪಬೇಕು ಎಂದು ಹೇಳಿದರು.
ಚೀಫ್ ಜನರಲ್ ಮೆನೇಜರ್ ರಾಘವೇಂದ್ರ ಭಟ್ ಎಂ. ಸ್ವಾಗತಿಸಿ, ಪ್ರಸ್ತಾವನೆಗೈದರು. ಜನರಲ್ ಮೆನೇಜರ್ ಚಂದ್ರಶೇಖರ್ ರಾವ್ ಬಿ. ಮಾಹಿತಿ ನೀಡಿದರು. ಜನರಲ್ ಮೆನೇಜರ್ಗಳಾದ ಸುಭಾಸ್ಚಂದ್ರ ಪುರಾಣಿಕ್, ವೈ. ವಿ. ಬಾಲಚಂದ್ರ, ಮುರಳೀಧರಕೃಷ್ಣರಾವ್, ನಾಗರಾಜ ರಾವ್ ಬಿ., ಗೋಕುಲ್ದಾಸ್ ಪೈ, ಮಂಜುನಾಥ ಭಟ್ ಬಿ. ಕೆ., ಮಹಾಲಿಂಗೇಶ್ವರ ಕೆ. ಉಪಸ್ಥಿತರಿದ್ದರು. ಡಿಜಿಎಂ ರವೀಂದ್ರ ಅಂದೆ ಎಚ್. ಪಿ. ವಂದಿಸಿದರು.