ನನಗೆ ನನ್ನದೆ ಆದ ಕ್ಷೇತ್ರವಿದೆ; ಬಿಎಸ್ವೈಗೆ ಇಲ್ಲ, ಹಾಗಾಗಿ..
Team Udayavani, Sep 19, 2017, 1:41 PM IST
ಬೆಂಗಳೂರು : ರಾಜ್ಯದ 224 ಕ್ಷೇತ್ರಗಳಲ್ಲಿ ಎಲ್ಲಿ ನಿಂತರೂ ನಾನು ಗೆಲ್ಲುತ್ತೇನೆ. ನನಗೆ ನನ್ನದೇ ಆದ ಕ್ಷೇತ್ರವಿದೆ, ಅಲ್ಲಿಂದಲೇ ಸ್ಪರ್ಧಿಸುತ್ತೇನೆ…ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಶ್ವಾಸದ ನುಡಿಗಳು.
ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರು ಕೋಲಾರದಿಂದ ಸ್ಪರ್ಧಿಸುವ ಕುರಿತು ಎಐಸಿಸಿಗೆ ವಿ.ಆರ್.ಸುದರ್ಶನ್ ಬರೆದ ಪತ್ರದ ಬಗ್ಗೆ ಪ್ರಶ್ನಿಸಿದಾಗ ಉತ್ತರಿಸಿದ ಸಿಎಂ ‘ನಾನು ರಾಜ್ಯದ 224 ಕ್ಷೇತ್ರಗಳಲ್ಲಿ ಎಲ್ಲಿ ನಿಂತರೂ ಗೆಲ್ಲುತ್ತೇನೆ. ನನ್ನ ಸ್ಪರ್ಧೆಯ ಬಗ್ಗೆ ವರಿಷ್ಠರು ನಿರ್ಧರಿಸುತ್ತಾರೆ’ ಎಂದರು.
ಬಿಜೆಪಿ ನಾಯಕರ ಫೋನ್ ಕದ್ದಾಲಿಕೆ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು ‘ಕೇಂದ್ರವೇ ನಮ್ಮ ಫೋನ್ ಕದ್ದಾಲಿಸುತ್ತಿದೆ. ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಇದೆಲ್ಲಾ ಚಿಲ್ಲರೆ ವ್ಯವಹಾರ’ ಎಂದರು.
ಯಡಿಯೂರಪ್ಪ ವಿರುದ್ಧ ಕಿಡಿ ಕಾರಿ ‘ಅವರು ಯಾವಾಗಲೂ ಸುಳ್ಳೇ ಹೇಳುವುದು. ಇನ್ನು ಚಾರ್ಜ್ ಶೀಟ್ ಎಲ್ಲಿಂದ ಬಿಡುಗಡೆ ಮಾಡುತ್ತಾರೆ’ ಎಂದು ಪ್ರಶ್ನಿಸಿದರು.
ನನಗೆ ನನ್ನದೆ ಆದ ಕ್ಷೇತ್ರವಿದೆ
ಸಂಜೆ ಕಲಬುರಗಿಯಲ್ಲಿ ಮಾತನಾಡಿದ ಸಿಎಂ ‘ ಅಭಿಮಾನಿಗಳು ಪ್ರೀತಿಯಿಂದ ನನ್ನನ್ನು ಉತ್ತರ ಕರ್ನಾಟಕ ಭಾಗದಿಂದ ಸ್ಫರ್ಧಿಸಲು ಕರೆಯುತ್ತಿದ್ದಾರೆ ಅಷ್ಟೇ.ನನಗೆ ನನ್ನದೆ ಆದ ಕ್ಷೇತ್ರವಿದೆ. ಅಲ್ಲಿಂದಲೆ ಸ್ಪರ್ಧೆ ಮಾಡುತ್ತೇನೆ. ಆದರೆ ಯಡಿಯೂರಪ್ಪಗೆ ಕ್ಷೇತ್ರವಿಲ್ಲ, ಹಾಗಾಗಿ ಹುಡುಕಿಕೊಂಡು ಹೊರಟಿದ್ದಾರೆ’ ಎಂದು ಲೇವಡಿ ಮಾಡಿ ಉತ್ತರ ಕರ್ನಾಟಕದಲ್ಲಿ ಸ್ಪರ್ಧಿಸುವ ಕುರಿತಾಗಿನ ಚರ್ಚೆ,ಗೊಂದಲಗಳಿಗೆ ತೆರೆ ಎಳೆದಿದ್ದಾರೆ.