ಮನೆಯನ್ನೇ ಸುಟ್ಟವರು, ನನ್ನನ್ನು ಸುಡದೆ ಬಿಡುತ್ತಾರಾ, ಈಗಲೂ ಬೆದರಿಕೆಯಿದೆ: ಶಾಸಕ ಅಖಂಡ
Team Udayavani, Feb 12, 2021, 3:40 PM IST
ಬೆಂಗಳೂರು: ನನ್ನ ಮನೆಯನ್ನೇ ಸುಟ್ಟವರು, ನನ್ನನ್ನು ಸುಡದೆ ಬಿಡುತ್ತಾರಾ? ಮನೆ ಸುಟ್ಟುಕೊಂಡು ನಾವು ಬೀದಿಯಲ್ಲಿದ್ದೇವೆ. ನನಗೆ ಈಗಲೂ ಜೀವ ಬೆದರಿಕೆಯಿದೆ. ಮುಂದೆಯೂ ಇದೆ ಎಂದು ಪುಲಕೇಶಿ ನಗರ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಹೇಳಿದರು.
ಡಿಜೆ ಹಳ್ಳಿ ಗಲಭೆ ಪ್ರಕರಣದ ಪ್ರಮುಖ ಆರೋಪಿ ಮಾಜಿ ಮೇಯರ್ ಸಂಪತ್ ರಾಜ್ ಗೆ ಬೇಲ್ ಸಿಕ್ಕ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಹೋರಾಟ ಮುಂದುವರಿಯಲಿದೆ. ಸಂಪತ್ ರಾಜ್ ಮೇಲೆ ಕ್ರಮಕ್ಕೆ ನಾನು ಒತ್ತಡ ತಂದಿದ್ದೇವೆ. ಕೆಪಿಸಿಸಿ ಅಧ್ಯಕ್ಷರಿಗೂ ಮನವಿ ಮಾಡಿದ್ದೇವೆ. ಆದರೂ ಅಧ್ಯಕ್ಷರು ಏನೂ ಕ್ರಮ ತೆಗೆದುಕೊಂಡಿಲ್ಲ ಎಂದರು.
ಇದನ್ನೂ ಓದಿ:ಎಫ್ ಐಆರ್ ನಿಂದ ಸುಂದರ್ ಪಿಚ್ಚೈ ಹೆಸರು ಕೈಬಿಟ್ಟ ಉತ್ತರಪ್ರದೇಶ ಪೊಲೀಸರು
ನ್ಯಾಯಾಲಯದ ಜಾಮೀನಿನ ಬಗ್ಗೆ ಮಾತನಾಡುವುದಿಲ್ಲ. ಅದನ್ನು ನಾನು ಒಪ್ಪುತ್ತೇನೆ. ಆದರೆ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ನಾನು ದೇವರನ್ನು ನಂಬಿದ್ದೇನೆ. ಆ ದೇವರು ಶಿಕ್ಷೆಯನ್ನ ಕೊಡಬೇಕು ಎಂದು ಹೇಳಿದರು.
ನಾನು ಹೋರಾಟ ಮುಂದುವರಿಸುತ್ತೇನೆ. ಮಾಧ್ಯಮಗಳು ನನ್ನ ಬೆಂಬಲಕ್ಕಿವೆ. ಮಾಧ್ಯಮಗಳು ನಮಗೆ ನ್ಯಾಯ ಕೊಡಿಸುವ ಭರವಸೆಯಿದೆ ಎಂದ ಶಾಸಕ ಅಖಂಡ, ಡಿ.ಕೆ.ಶಿವಕುಮಾರ್ ಯಾಕೆ ಸಂಪತ್ ರಾಜ್ ಪರ ನಿಂತಿದ್ದಾರೋ ಗೊತ್ತಿಲ್ಲ. ಮಾಧ್ಯಮದವರೇ ಅವರನ್ನು ಕೇಳಬೇಕು. ನಾನು ವಲಸೆ ಬಂದಿರಬಹುದು. ಆದರೆ ಅತಿ ಹೆಚ್ಚಿನ ಮತಗಳಿಂದ ಗೆದ್ದವನು. ಈ ಬಗ್ಗೆ ಸೋನಿಯಾ ಗಾಂಧಿಯವರಿಗೆ ಪತ್ರ ಬರೆಯುತ್ತೇವೆ ಎಂದರು.