ವಿದೇಶಿ ಭಯೋತ್ಪಾದಕ ಸಂಘಟನೆಗಳ ಮೇಲೆ ನಿಗಾ; ರಾಜ್ಯದ ಎಂಟು ಮಂದಿ ಐಸಿಸ್, ಐಎಸ್ಕೆಪಿ ಸೇರ್ಪಡೆ
ಪಿಎಫ್ಐ ನೊಂದಿಗೆ ಕೆಲವರ ಸಂಪರ್ಕ ಆರೋಪ ಸಂಪರ್ಕ
Team Udayavani, Oct 3, 2022, 7:00 AM IST
ಬೆಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ) ನಿಷೇಧಗೊಂಡ ಬೆನ್ನಲ್ಲೇ ತೀವ್ರ ಕಟ್ಟೆಚ್ಚರ ವಹಿಸಿರುವ ರಾಷ್ಟ್ರೀಯ ತನಿಖಾ ದಳ (ಎನ್ಐಎ), ಭಯೋತ್ಪಾದನ ನಿಗ್ರಹ ಪಡೆ(ಎಟಿಎಸ್) ಹಾಗೂ ಕೇಂದ್ರದ ತನಿಖಾ ಸಂಸ್ಥೆಗಳು ವಿದೇಶ ದಲ್ಲಿರುವ ಉಗ್ರ ಸಂಘಟನೆಗಳ ಕಾರ್ಯ ಚಟು ವಟಿಕೆಗಳ ಬಗ್ಗೆ ನಿಗಾವಹಿಸಿವೆ. ಜತೆಗೆ ರಾಜ್ಯದಲ್ಲಿರುವ ಸಂಘಟನೆಗಳ ಸ್ಲಿàಪರ್ ಸೆಲ್ಗಳ ಬಗ್ಗೆಯೂ ಕಾರ್ಯಾಚರಣೆ ಆರಂಭಿಸಿದ್ದಾರೆ.
2019ರಲ್ಲಿ ದೇಶದಲ್ಲಿ ಸಿಎಎ ಮತ್ತು ಎನ್ಆರ್ಸಿ ಜಾರಿಗೊಳಿಸಿದ ಬಳಿಕ ವಿದೇಶದಲ್ಲಿರುವ ಉಗ್ರ ಸಂಘಟನೆಗಳು ಭಾರತದಲ್ಲಿದ್ದ ಕೆಲ ಸಂಘ ಟನೆ ಗಳಿಗೆ ಆರ್ಥಿಕ ಸಹಾಯದ ಜತೆಗೆ ಉಗ್ರ ಚಟುವಟಿಕೆಗಳಿಗೆ ಪ್ರಚೋದನೆ ನೀಡಿದ್ದವು. ಇದು ದೇಶದಲ್ಲಿರುವ ಸಂಘಟನೆಗಳು ಆರ್ಥಿಕ ಹಾಗೂ ತಾಂತ್ರಿಕವಾಗಿ ಸದೃಢಗೊಳ್ಳಲು ನೆರವಾಯಿತು.
ಈ ಮಧ್ಯೆ ಪಿಎಫ್ಐ ಸಂಘಟನೆಯ ಸಂಪರ್ಕ ಹೊಂದಿದ್ದ ಕೆಲವು ವ್ಯಕ್ತಿಗಳು ಐಸಿಸ್ ಹಾಗೂ ಅಫ್ಘಾನಿಸ್ಥಾನದ ಐಎಸ್ಕೆಪಿ ಸಂಘಟನೆ ಸೇರಿರುವುದು ಪತ್ತೆಯಾಗಿದೆ. ಇಸ್ಲಾಮಿಕ್ ಸ್ಟೇಟ್ಸ್ ಕೋರೆಸನ್ ಪ್ರೋವೆನ್ಸ್(ಐಎಸ್ಕೆಪಿ) ಹಾಗೂ ಐಸಿಸ್ ಸೇರಲು ದಕ್ಷಿಣ ಭಾರತದ 4 ರಾಜ್ಯಗಳಿಂದ ಸುಮಾರು 97ಕ್ಕೂ ಹೆಚ್ಚು ಮಂದಿ ತೆರಳಿದವರ ಪೈಕಿ ತಮಿಳುನಾಡು, ಕೇರಳದಿಂದಲೇ ಹೆಚ್ಚು. ಕೇರಳ 21, ಕರ್ನಾಟಕ 8, ತೆಲಂಗಾಣ 14, ತಮಿಳುನಾಡಿನ 33 ಮಂದಿ ಸಂಘಟನೆ ಸೇರಿದ್ದಾರೆ. ವಿಪರ್ಯಾಸವೆಂದರೆ ಇವರಲ್ಲಿ ಕೆಲವರು ಪಿಎಫ್ಐ ಸಂಘಟನೆ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಇದು ದಕ್ಷಿಣ ಭಾರತದಲ್ಲಿ ಇಸ್ಲಾಮಿಕ್ ಸ್ಟೇಟ್ ಸಕ್ರಿಯಗೊಳಿಸುವ ಸಂಚು ಎನ್ನಲಾಗಿದೆ.
ಬೆಂಗಳೂರಿನ ಮಾದೇಶ್ ಪೆರುಮಾಳ್, ಮಂಗಳೂರಿನ ಮರಿಯಾ ಹೀಗೆ ಎಂಟು ಮಂದಿ ಐಎಸ್ಕೆಪಿ ಹಾಗೂ ಐಸಿಸ್ ಸಂಘಟನೆಗಳ ಜತೆ ಸಂಪರ್ಕ ದಲ್ಲಿದ್ದರು. ಕೆಲವರು ಸಿರಿಯಾಕ್ಕೆ ತೆರಳಿದ್ದರೆ, ಇನ್ನು ಕೆಲವರು ಅಲ್ಲಿಂದ ವಾಪಸಾಗಿ ಸ್ಥಳೀಯವಾಗಿ ಚಟ ವಟಿಕೆ ನಿರತರಾಗಿದ್ದರು. ಪ್ರಸ್ತುತ ಎನ್ಐಎ ಕಾರ್ಯಾ ಚರಣೆ ನಡೆಸಿ ಎಲ್ಲ 8 ಮಂದಿಯನ್ನು ಬಂಧಿಸಿದೆ.
ಸ್ಲೀಪರ್ ಸೆಲ್ಗಳು ಸಕ್ರಿಯ
ಪಿಎಫ್ಐ ನಿಷೇಧದ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿ ದೇಶದಲ್ಲಿ ನಿಷೇಧಿತ ಸಂಘಟನೆಗಳ ಸಂಪರ್ಕದಲ್ಲಿರುವ ಸ್ಲೀಪರ್ ಸೆಲ್ಗಳು ಸಕ್ರಿಯವಾಗತೊಡಗಿವೆ. ಇಷ್ಟು ದಿನಗಳ ಕಾಲ ಕೆಲ ವಿವಿಧ ಸಂಘಟನೆಗಳ ನೆರಳಿನಲ್ಲಿ ಕೆಲ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗುತ್ತಿದ್ದ ಸ್ಲೀಪರ್ ಸೆಲ್ಗಳು, ಈಗ ಮುನ್ನೆಲೆಗೆ ಬಂದಿವೆ ಎಂದು ಮೂಲಗಳು ತಿಳಿಸಿವೆ.
ಪಿಎಫ್ಐ ಕೆಲವು ಮುಖಂಡರು ಹಾಗೂ ಸದಸ್ಯರು ದುಬೈ ಮತ್ತು ಕತಾರ್ಗೆ ಹೋಗಿ ಟರ್ಕಿ, ಸಿರಿಯಾದ ಕೆಲ ವ್ಯಕ್ತಿಗಳನ್ನು ಭೇಟಿಯಾಗಿದ್ದರು. ಕೆಲವರು ಇಸ್ತಾಂಬುಲ್ಗೂ ಹೋಗಿಅಲ್-ಖೈದಾ ಸಂಸ್ಥೆಗೆ ಸೇರಿದ ಚಾರಿಟಿ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಆತಿಥ್ಯವನ್ನೂ ಸ್ವೀಕರಿಸಿದ್ದರು ಎನ್ನಲಾಗಿದೆ. ಈ ಎಲ್ಲ ಬೆಳವಣಿಗೆಗಳ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿರುವ ತನಿಖಾ ಸಂಸ್ಥೆಗಳು ವಿದೇಶದಲ್ಲಿರುವ ಉಗ್ರ ಸಂಘಟನೆಗಳ ಚಟುವಟಿಕೆಗಳಲ್ಲದೇ, ದೇಶದಲ್ಲಿರುವ ನಿಷೇಧಿತ ಸಂಘಟನೆಗಳ ಸ್ಲಿàಪರ್ ಸೆಲ್ಗಳ ಮೇಲೂ ಹದ್ದಿನ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.
ದುಬೈ ವ್ಯಕ್ತಿಗಳೊಡನೆ ಸಂಪರ್ಕ
ಇತ್ತೀಚೆಗೆ ಎನ್ಐಎ ಕಾರ್ಯಾಚರಣೆಯಲ್ಲಿ ಬಂಧನಕ್ಕೊಳಗಾದ ಬೆಂಗಳೂರಿನ 7 ಮಂದಿ ಪಿಎಫ್ಐ ಮುಖಂಡರು ದುಬಾೖಯ ಕೆಲವು ವ್ಯಕ್ತಿಗಳ ಜತೆ ಸಂಪರ್ಕ ಹೊಂದಿರುವುದು ಪತ್ತೆಯಾಗಿದೆ. ಜತೆಗೆ “ಹವಾಲಾ’ ಹಣ ವರ್ಗಾವಣೆ ನಡೆದಿರುವುದು ಖಾತ್ರಿಯಾಗಿದೆ. ಹೀಗಾಗಿ ಆರೋಪಿಗಳನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ತನಿಖಾ ಸಂಸ್ಥೆಯ ಮೂಲಗಳು ತಿಳಿಸಿವೆ.
- ಮೋಹನ್ ಭದ್ರಾವತಿ