ರಾಜ್ಯ ಸಭಾ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಯಾಗಿ ಜೈರಾಂ ರಮೇಶ್ ಆಯ್ಕೆ
ಬಿಜೆಪಿ ಪಟ್ಟಿ ಇನ್ನೂ ಇಲ್ಲ.. !
Team Udayavani, May 26, 2022, 9:16 PM IST
ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸುತ್ತಿರುವ ಜೈರಾಮ್ ರಮೇಶ್
ಬೆಂಗಳೂರು: ವಿಧಾನ ಸಭೆಯಿಂದ ರಾಜ್ಯ ಸಭೆಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಹಿರಿಯ ನಾಯಕ ಜೈರಾಂ ರಮೇಶ್ ಆಯ್ಕೆಯಾಗಿದ್ದಾರೆ. ಮೇ 30, ಸೋಮವಾರ ಜೈರಾಂ ರಮೇಶ್ ಅವರು ನಾಮಪತ್ರ ಸಲ್ಲಿಸಲಿದ್ದಾರೆ.
ಈ ಮಧ್ಯೆ, ಬೆಂಗಳೂರಿಗೆ ಆಗಮಿಸಿರುವ ಜೈರಾಂ ರಮೇಶ್ ಗುರುವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿದರು.
ಎಐಸಿಸಿಯಿಂದ ಟಿಕೆಟ್ ಖಚಿತವಾದ ಬಳಿಕ ವರಿಷ್ಠರ ನಿರ್ದೇಶನದ ಮೇರೆಗೆ ಜೈರಾಂ ರಮೇಶ್ ರಾಜ್ಯದ ನಾಯಕರನ್ನು ಭೇಟಿ ಮಾಡಿ ನಾಮಪತ್ರ ಸಲ್ಲಿಕೆಗೆ ಸಿದ್ಧತೆ ನಡೆಸಿದ್ದಾರೆ.
ಜೈರಾಂ ರಮೇಶ್ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಸೋಮವಾರ ಕಾಂಗ್ರೆಸ್ ಶಾಸಕರು ಹಾಗೂ ಮುಖಂಡರ ಸಭೆ ನಡೆಯಲಿದ್ದು, ಎಲ್ಲ ಶಾಸಕರಿಗೂ ಹಾಜರಾಗಲು ಸೂಚನೆ ನೀಡಲಾಗಿದೆ.
68 ರ ಹರೆಯದ ಜೈರಾಂ ರಮೇಶ್ ಅವರು ಅರ್ಥಶಾಸ್ತ್ರಜ್ಞ ರಾಗಿದ್ದು, ಕೇಂದ್ರ ಸಚಿವರಾಗಿಯೂ ಕೆಲಸ ನಿರ್ವಹಿಸಿ ಕಾಂಗ್ರೆಸ್ ಪಕ್ಷದಲ್ಲಿ ತನ್ನದೇ ಆದ ಹಿಡಿತ ಹೊಂದಿದ್ದಾರೆ.
ಬಿಜೆಪಿ ಪಟ್ಟಿ ಇನ್ನೂ ಇಲ್ಲ
ನಾಲ್ಕು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಎರಡು ಗೆಲ್ಲುವ ಅವಕಾಶವಿದ್ದು ಇನ್ನೂ ಅಭ್ಯರ್ಥಿಗಳ ಆಯ್ಕೆ ಮಾಡಿಲ್ಲ. ಇದರ ನಡುವೆ ಬಿಜೆಪಿ ಮೂರನೇ ಅಭ್ಯರ್ಥಿ ಹಾಗೂ ಕಾಂಗ್ರೆಸ್ ಎರಡನೇ ಅಭ್ಯರ್ಥಿ ಕಣಕ್ಕಿಳಿಸುವ ಮಾತುಗಳು ಕೇಳಿಬರುತ್ತಿವೆ.
ಆದರೆ, ಜೆಡಿಎಸ್ ತಮ್ಮ ಪಕ್ಷದಿಂದ ಅಭ್ಯರ್ಥಿ ಹಾಕುವುದಾಗಿ ಘೋಷಿಸಿರುವುದು ಕುತೂಹಲ ಮೂಡಿಸಿದೆ. ಜೆಡಿಎಸ್ ತನ್ನ ಅಭ್ಯರ್ಥಿ ಗೆಲುವಿಗೆ ಅಧಿಕೃತವಾಗಿ ಯಾರ ಬೆಂಬಲ ಪಡೆಯುತ್ತದೆ ಎಂಬುದು ಕಾದು ನೋಡಬೇಕು.