ಖರ್ಗೆ ನೆನೆದು ಕಣ್ಣೀರು ಹಾಕಿದ ಕಮಕನೂರು
Team Udayavani, Jun 1, 2019, 3:05 AM IST
ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರನ್ನು ನಾವೆಲ್ಲರೂ ಸೇರಿ ಸೋಲಿಸಿ ಬಿಟ್ಟೆವು. ನಾವೆಲ್ಲರೂ ಇದಕ್ಕೆ ಜವಾಬ್ದಾರರು ಎಂದು ವಿಧಾನ ಪರಿಷತ್ ನೂತನ ಸದಸ್ಯ ತಿಪ್ಪಣ್ಣ ಕಮಕನೂರು ಭಾವುಕರಾಗಿ ಹೇಳಿದ್ದಾರೆ.
ಶುಕ್ರವಾರ ರಾಜ್ಯ ವಿಧಾನ ಪರಿಷತ್ ಸದಸ್ಯರಾಗಿ ಅವರು ಪ್ರಮಾಣ ವಚನ ಸ್ವೀಕರಿಸಿದರು. ವಿಧಾನ ಪರಿಷತ್ ಸಭಾಪತಿ ಪ್ರತಾಪಚಂದ್ರ ಶೆಟ್ಟಿಯವರು ತಿಪ್ಪಣ್ಣ ಅವರಿಗೆ ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ನಂತರ ಪಕ್ಷದ ಮುಖಂಡರ ಅಭಿನಂದನಾ ಸಭೆಯಲ್ಲಿ ಮಾತನಾಡಿದ ಅವರು, “ಪ್ರತಿ ಸಾರಿ ನಾನು ಖರ್ಗೆಯವರನ್ನು ದೆಹಲಿಗೆ ಖುಷಿಯಿಂದ ಕಳುಹಿಸಿಕೊಡುತ್ತಿದ್ದೆ. ಈ ಬಾರಿ ದೆಹಲಿಗೆ ಕಳುಹಿಸದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಾವೆಲ್ಲರೂ ಇದರ ಹೊಣೆಗಾರರು’ ಎಂದು ಹೇಳಿದರು.
ಸೋಲಿಲ್ಲದ ಸರದಾರ, ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸೋಲಿನಿಂದ ನೋವಾಗಿದ್ದು, ಈ ಸಂದರ್ಭದಲ್ಲಿ ತಾವು ವಿಧಾನ ಪರಿಷತ್ ಸದಸ್ಯರಾಗಿ ನೇಮಕ ಆಗಿರುವುದರಿಂದ ಯಾವುದೇ ರೀತಿಯ ಸಂಭ್ರಮ, ಮೆರವಣಿಗೆ ಮಾಡದಂತೆ ಪಕ್ಷದ ಮುಖಂಡರಿಗೆ ಮನವಿ ಮಾಡಿದರು. ಅವರ ಕುಟುಂಬದ ನೆರವಿನಿಂದಲೇ ನಾನು ವಿಧಾನ ಪರಿಷತ್ ಸದಸ್ಯನಾಗಿದ್ದೇನೆ ಎಂದರು.
ಆದರೆ, ಅವರ ಮನವಿಗೆ ಆಕ್ಷೇಪ ವ್ಯಕ್ತಪಡಿಸಿದ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ, ನಮ್ಮನ್ನು ಸೋಲಿಸಿದವರಿಗೆ ಕಾಂಗ್ರೆಸ್ ಜೀವಂತ ಇದೆ ಎನ್ನುವುದನ್ನು ತೋರಿಸಬೇಕು. ದೊಡ್ಡ ಪ್ರಮಾಣದಲ್ಲಿ ಮೆರವಣಿಗೆ ಮಾಡಿ, ಅವರಿಗೆ ನಮ್ಮ ಶಕ್ತಿಯನ್ನು ತೋರಿಸಬೇಕು ಎಂದು ಹೇಳಿದರು.