ಸೋಮವಾರ ಬಂದ್; ವಿಶ್ವಾಸ “ಪರೀಕ್ಷೆಯಲ್ಲಿ” ಎಚ್ ಡಿಕೆ ಉತ್ತೀರ್ಣ
Team Udayavani, May 25, 2018, 3:57 PM IST
ಬೆಂಗಳೂರು:ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿಯಾಗಿ ಬುಧವಾರ ಅಧಿಕಾರ ಸ್ವೀಕರಿಸಿದ್ದ ಎಚ್ ಡಿ ಕುಮಾರಸ್ವಾಮಿ ಶುಕ್ರವಾರ ವಿಧಾನಸಭೆಯಲ್ಲಿ ನಡೆದ ಸುದೀರ್ಘ ಭಾಷಣದ ನಂತರ ಬಿಜೆಪಿಯ ಸಭಾತ್ಯಾಗದ ಮಧ್ಯೆ ಧ್ವನಿ ಮತದ ಮೂಲಕ ಬಹುಮತ ಸಾಬೀತು ಪಡಿಸಿದ್ದಾರೆ.
ಇಂದು ಬೆಳಗ್ಗೆ ವಿಧಾನಸಭಾ ಕಲಾಪದಲ್ಲಿ ಮೊದಲು ರಮೇಶ್ ಕುಮಾರ್ ಅವರು ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಬಿಜೆಪಿಯ ಸುರೇಶ್ ಕುಮಾರ್ ನಾಮಪತ್ರ ವಾಪಸ್ ಪಡೆದುಕೊಂಡಿದ್ದರು.
ತದನಂತರ ನೂತನ ಸ್ಪೀಕರ್ ರಮೇಶ್ ಕುಮಾರ್ ಅವರ ಸಭಾಧ್ಯಕ್ಷತೆಯಲ್ಲಿ ಕಲಾಪ ಆರಂಭಗೊಂಡಿತ್ತು. ನೂತನ ಸಿಎಂ ಕುಮಾರಸ್ವಾಮಿ, ವಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ, ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಸೇರಿದಂತೆ ಹಲವು ಮುಖಂಡರು ಸ್ಪೀಕರ್ ರಮೇಶ್ ಕುಮಾರ್ ಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು.
ಸುದೀರ್ಘ ಭಾಷಣ:
ವಿಶ್ವಾಸಮತ ಯಾಚನೆ ಪ್ರಸ್ತಾಪದಲ್ಲಿ ಎಚ್ ಡಿ ಕುಮಾರಸ್ವಾಮಿ ಅವರು ಸುದೀರ್ಘವಾಗಿ ಭಾಷಣ ಮಾಡಿದರು.
ಸೋಮವಾರ ಬಂದ್ ಗೆ ಕರೆ ಕೊಟ್ಟ ಬಿಎಸ್ ವೈ; ಬಿಜೆಪಿ ಸಭಾತ್ಯಾಗ
ಎಚ್ ಡಿ ಕುಮಾರಸ್ವಾಮಿಯವರ ಭಾಷಣಕ್ಕೆ ಪ್ರತಿಕ್ರಿಯೆ ನೀಡಿ ಬಿಎಸ್ ಯಡಿಯೂರಪ್ಪ ಕೂಡಾ ಸುದೀರ್ಘ ಭಾಷಣ ಮಾಡಿ, ಜೆಡಿಎಸ್ ಹಾಗೂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೇ 24ಗಂಟೆಯೊಳಗೆ ರಾಷ್ಟ್ರೀಕೃತ, ಸಹಕಾರಿ ಬ್ಯಾಂಕ್ ಗಳ ಸಾಲಮನ್ನಾ ಮಾಡಬೇಕು, ಇಲ್ಲದಿದ್ದರೆ ಸೋಮವಾರ ಕರ್ನಾಟಕ ಬಂದ್ ನಡೆಸುವುದಾಗಿ ಘೋಷಿಸುವ ಮೂಲಕ ಬಿಜೆಪಿ ಶಾಸಕರು ವಿಶ್ವಾಸಮತ ಯಾಚನೆಯ ಕಲಾಪವನ್ನು ಬಹಿಷ್ಕರಿಸಿ ಹೊರನಡೆದರು.
ವಿಶ್ವಾಸ ಪರೀಕ್ಷೆಯಲ್ಲಿ ಎಚ್ ಡಿಕೆ ಉತ್ತೀರ್ಣ:
ಸದನದಲ್ಲಿ ಹಾಜರಿದ್ದ ಶಾಸಕರಿಗೆ ಪ್ರಸ್ತಾಪದ ಪರ ಇರುವವರು ಹೌದು ಎಂದು ಸೂಚಿಸಬೇಕು ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದಾಗ, ಹೌದು ಎಂದಾಗ ಪ್ರಸ್ತಾಪ ಅಂಗೀಕರಿಸಲ್ಪಟ್ಟು, ಬಹುಮತ ಸಾಬೀತಾಗಿದೆ ಎಂದು ಅಂಗೀಕರಿಲ್ಪಟ್ಟಿದೆ ಎಂದು ಘೋಷಿಸಿದರು. ಅಲ್ಲದೇ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿರುವುದಾಗಿ ಹೇಳಿದರು.