ಸದನಕ್ಕೆ ಸ್ಪೀಕರ್ ಕಾಗೇರಿ ಅಭಿನಂದನೆ
Team Udayavani, Feb 25, 2023, 6:45 AM IST
ಬೆಂಗಳೂರು: ಇಡೀ ವಿಶ್ವದಲ್ಲಿ ಭಾರತದಂಥ ಪ್ರಜಾಪ್ರಭುತ್ವ ರಾಷ್ಟ್ರ ಇನ್ನೊಂದಿಲ್ಲ. ಆದರೆ ಬರಬರುತ್ತಾ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾರಂಗದ ಜತೆಗೆ ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಆದರ್ಶ, ಮೌಲ್ಯಗಳು ಕುಸಿಯುತ್ತಿವೆ. ಇದು ನಿಲ್ಲಬೇಕು. ದೇಶ ಮೊದಲು ಎಂಬ ಭಾವ ಎಲ್ಲರಲ್ಲೂ ಮೂಡಿ ಪ್ರಜಾಪ್ರಭುತ್ವ ಗಟ್ಟಿಯಾಗಬೇಕು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆಶಯ ವ್ಯಕ್ತಪಡಿಸಿದ್ದಾರೆ.
15ನೇ ವಿಧಾನಸಭೆಯ ಕೊನೆಯ ದಿನ ಶಾಸಕರ ವಿದಾಯ ಭಾಷಣದ ಬಳಿಕ ಮಾತನಾಡಿ, ಸಭಾಧ್ಯಕ್ಷ ಸ್ಥಾನವನ್ನು ಸಮರ್ಥವಾಗಿ ನಡೆಸಲು ಸಹಕಾರ ನೀಡಿದ ಮುಖ್ಯಮಂತ್ರಿಗಳು, ವಿಪಕ್ಷ ನಾಯಕರ ಆದಿಯಾಗಿ ಎಲ್ಲ ಸದಸ್ಯರಿಗೂ ಅಭಿನಂದನೆ ಸಲ್ಲಿಸಿದರು.
760 ತಾಸು ಕಲಾಪ
2019ರ ಜುಲೈ 31ರಂದು ನಾನು ಸ್ಪೀಕರ್ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದುವರೆಗೆ 15 ಬಾರಿ ವಿಧಾನಸಭೆ ಅಧಿವೇಶ ನಡೆಸಲಾಗಿದೆ. ಒಟ್ಟು 167 ದಿನಗಳಲ್ಲಿ 760 ಗಂಟೆಗಳ ಕಾಲ ನಡೆದ ಕಾರ್ಯಕಲಾಪದಲ್ಲಿ ಸುಮಾರು 200 ಮಸೂದೆಗಳನ್ನು ಅಂಗೀಕರಿಸಲಾಗಿದೆ. ಇದು ಸದನಕ್ಕೆ ದೊಡ್ಡ ಗೌರವದ ವಿಚಾರ ಎಂದು ಕಾಗೇರಿ ಅಭಿಪ್ರಾಯಪಟ್ಟರು.