1ರಿಂದ 10ನೇ ತರಗತಿ ವರೆಗೆ ಕನ್ನಡ ಮಾಧ್ಯಮದಲ್ಲೆ ಕಲಿಕೆ ಇರಲಿ: ಪದ್ಮಶ್ರೀ ಮಂಜಮ್ಮ ಜೋಗತಿ
Team Udayavani, Feb 14, 2022, 6:40 AM IST
ಬೆಂಗಳೂರು: ಆಂಗ್ಲ ಮಾಧ್ಯಮ ಶಿಕ್ಷಣದಿಂದಾಗಿಯೇ ಈ ನೆಲದ ಶ್ರೀಮಂತ ಸಂಸ್ಕೃತಿಗೆ ಧಕ್ಕೆ ಬಂದಿದ್ದು ಆ ಹಿನ್ನೆಲೆಯಲ್ಲಿ 1 ನೇ ತರಗತಿಯಿಂದ 10ನೇ ತರಗತಿಯ ವರೆಗೆ ಕಡ್ಡಾಯವಾಗಿ ಕನ್ನಡ ಮಾಧ್ಯಮದಲ್ಲೆ ಕಲಿಕೆ ನೀಡಿ ಎಂದು ಪೋಷಕರಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಬಿ. ಮಂಜಮ್ಮ ಜೋಗತಿ ಮನವಿ ಮಾಡಿದರು.
ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಮೈಕೊ ಕನ್ನಡ ಬಳಗ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜ್ಞಾನಪೀಠ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ ಅವರಿಗೆ “ರಾಬರ್ಟ್ ಬಾಷ್ ಕನ್ನಡ ಸಾಹಿತ್ಯ ಸೇವಾ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿರುವಾಗಲೂ ಮಕ್ಕಳು ಎಲ್ಲರಿಗೂ ಅಂಕಲ್, ಆಂಟಿ ಎಂದು ಕರೆಯುತ್ತಾರೆ. ಅವರಿಗೆ ಚಿಕ್ಕಪ್ಪ-ಚಿಕ್ಕಮ್ಮ, ದೊಡ್ಡಪ್ಪ-ದೊಡಮ್ಮ, ಅತ್ತೆ-ಮಾವರ ಸಂಬಂಧವೇ ಗೊತ್ತಿಲ್ಲ. ಹೀಗಾಗಿ ಮನೆ ಮಾತು ಕೂಡ ಕನ್ನಡವಾಗಿದ್ದರೆ ಕನ್ನಡ ಭಾಷೆ ಉಳಿಯಲಿದೆ ಎಂದರು.
ಈ ನೆಲದ ಭಾಷೆಯಲ್ಲಿ ಶ್ರೀಮಂತ ಸಂಸ್ಕೃತಿ ಅಡಗಿದೆ. ಜಾನಪದ ಉಳಿವಿಗೂ ಅದು ಕಾರಣವಾಗಿದೆ. ನಮ್ಮ ಮನೆಯ ಭಾಷೆಯ ಬಗ್ಗೆ ನಮಗೆ ಕೀಳರಿಮೆ ಬೇಡ ನಾನು ಪದ್ಮಶ್ರೀ ಸೇರಿದಂತೆ ಹಲವು ಪ್ರಶಸ್ತಿಯನ್ನು ಪಡೆದಿರುವುದು ಕಲೆಯ ಆರಾಧನೆಯಿಂದ. ಈ ಕಲೆ ಆರಾಧನೆಗೆ ಮೂಲ ಕಾರಣ ನಮ್ಮ ನೆಲೆಯ ಸಂಸ್ಕೃತಿ, ಭಾಷೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಮಾತನಾಡಿ ಎಲ್ಲಿ ಜೀವಂತಿಕೆ ಇರುತ್ತದೆಯೋ ಅಲ್ಲಿ ಭಾಷೆ ಇರುತ್ತದೆ. ಮೈಕೋ ಕಂಪನಿಯು ಈಗ ಬಾಷ್ ಆಗಿದ್ದು ಶತಮಾನೋತ್ಸವ ಸಮಾರಂಭದಲ್ಲಿರುವ ಈ ಕಂಪನಿ ಶತಮಾನೋತ್ಸವ ಸಮಾರಂಭದಲ್ಲಿ ಕನ್ನಡ ಭಾಷೆಗೆ ಮತ್ತಷ್ಟು ವಿಶೇಷ ಸ್ಥಾನ ನೀಡಲಿ ಎಂದರು.
ಸಂಸ್ಕೃತಿಯ ಕೀಳರಿಮೆ
ಪ್ರಶಸ್ತಿ ಸ್ವೀಕರಿಸಿ ಮಾತನಾಡಿ ಸಾಹಿತಿ ಚಂದ್ರಶೇಖರ ಕಂಬಾರ, ನಮ್ಮ ದೇಶಕ್ಕೆ ಬ್ರಿಟಿಷರ ಆಗಮವಾದಾಗ ಅವರು ನಮಗೆ ಇತಿಹಾಸದ ಕಲ್ಪನೆ ನೀಡಿ ನಮ್ಮ ಸಂಸ್ಕೃತಿಯ ಬಗ್ಗೆ ನಮ್ಮಲ್ಲೆ ಕೀಳರಿಮೆ ಉಂಟು ಮಾಡಿದರು ಎಂದರು ಹೇಳಿದರು.
ಜರ್ಮನಿಯರಿಂದ ನಮ್ಮ ಸಂಸ್ಕೃತಿಯ ಅಸ್ಮಿತೆ ತಿಳಿಯಿತು. ಅವರು ನಮ್ಮಲ್ಲಿ ಕಾಳಿದಾಸ ನಂತ ಕವಿ ಇದ್ದ. ಆತ ಉತ್ತಮ ಸಾಹಿತ್ಯವನ್ನು ನೀಡಿದ್ದ ಎಂಬುವುದನ್ನು ನಮಗೆ ಮನವರಿಕೆ ಮಾಡಿಕೊಟ್ಟರು ಎಂದು ತಿಳಿಸಿದರು. ಮೈಕೊ ನೌಕರರ ಒಕ್ಕೂಟದ ಅಧ್ಯಕ್ಷ ವಿ.ಜೆ.ಕೆ.ನಾಯರ್, ಪದ್ಮಿನಿ ನಾಗರಾಜ್ ಸೇರಿದಂತೆ ಮತ್ತಿತರರು