ಯತಿಗಳಿಗೆ ಪ್ರತಿದಿನ ಆತ್ಮಲಿಂಗ ಪೂಜೆ ಅವಕಾಶ: ರಾಘವ ಶ್ರೀ
Team Udayavani, Jan 10, 2017, 3:45 AM IST
ಹುಬ್ಬಳ್ಳಿ: ನಾಡಿನ ಯತಿಗಳಿಗೆ ಪ್ರತಿನಿತ್ಯ ಶ್ರೀ ಕ್ಷೇತ್ರ ಗೋಕರ್ಣದ ಆತ್ಮಲಿಂಗ ಪೂಜೆಗೆ ಅವಕಾಶ ಹಾಗೂ ಶ್ರೀ ಮಠದ
ವತಿಯಿಂದ ಯತಿಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮಕ್ಕೆ ಸೋಮವಾರದಿಂದ ಚಾಲನೆ ನೀಡಲಾಗಿದ್ದು, ಶ್ರೀಶೈಲ
ಜಗದ್ಗುರುಗಳು ಪೂಜೆ ನೆರವೇರಿಸಿದ್ದಾರೆ ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಸ್ವಾಮೀಜಿ ಹೇಳಿದರು.
ರಾಜ್ಯದಲ್ಲಿ ಸುಮಾರು 5000 ಮಠಗಳಿದ್ದು, ಎಲ್ಲ ಮಠಗಳ ಮಠಾಧೀಶರನ್ನು ಗೋಕರ್ಣಕ್ಕೆ ಆಹ್ವಾನಿಸಲಾಗುವುದು. ಮಠದ ವತಿಯಿಂದ ಯತಿಗಳನ್ನು ಸಂಪರ್ಕಿಸಿ ವರ್ಷಕ್ಕೊಂದು ದಿನ ಪೂಜೆಗೆ ಅವಕಾಶ ನೀಡಲಾಗುವುದು.
ಭಕ್ತರ ಕೇಂದ್ರ ಯತಿಗಳ ಕೇಂದ್ರವಾಗಲಿದೆ. ಶ್ರೀ ಮಠದ ವತಿಯಿಂದ ಈಗಾಗಲೇ ಅನ್ಯ ಧರ್ಮದ ಸಾಧಕರನ್ನು ಗೌರವಿಸಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಗೋಕರ್ಣ ಮಠವನ್ನು ವಶಕ್ಕೆ ಪಡೆಯುವ ಯಾವುದೇ
ಪ್ರಸ್ತಾಪ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಮುಜರಾಯಿ ಸಚಿವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದು ಶ್ರೀಗಳು ಹೇಳಿದರು.
ಗೋಯಾತ್ರೆಗೆ ಉತ್ತಮ ಪ್ರತಿಕ್ರಿಯೆ ಲಭಿಸುತ್ತಿದೆ. ಸುಮಾರು 1000 ಯತಿಗಳು ಯಾತ್ರೆಗೆ ಬೆಂಬಲ ನೀಡಿದ್ದಾರೆ. ಹಲವೆಡೆ ಸಮಾವೇಶ, ಶೋಭಾಯಾತ್ರೆಗಳು ನಡೆದಿವೆ. ಜ.29ರಂದು ಮಂಗಳೂರಿನಲ್ಲಿ ಸಮಾರೋಪ ನಡೆಯಲಿದ್ದು, ಸುಮಾರು 1500 ಮಠಾಧೀಶರು ಭಾಗವಹಿಸಲಿದ್ದಾರೆ ಎಂದರು.