ಕಳಂಕಿತ ರಾಜಕಾರಣಿಗಳಿಗೆ ಆಜೀವ ನಿಷೇಧವಾಗಲಿ:ದೊರೆಸ್ವಾಮಿ
Team Udayavani, Nov 5, 2017, 12:13 PM IST
ಬೆಂಗಳೂರು: ಕಳಂಕಿತ ರಾಜಕಾರಣಿಗಳ ವಿರುದ್ಧದ ಪ್ರಕರಣ ಇತ್ಯರ್ಥದ ಸಂಬಂಧ ವಿಶೇಷ ನ್ಯಾಯಾಲಯ ಸ್ಥಾಪಿಸಲು ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ತಾಕೀತು ಮಾಡಿರುವುದು ಸ್ವಾಗತಾರ್ಹ. ಆರೋಪ ಸಾಬೀತಾದ ಭ್ರಷ್ಟ ರಾಜಕಾರಣಿಗಳಿಗೆ ಆಜೀವ ನಿಷೇಧ ಹೇರುವ ಕಾಯ್ದೆ ಜಾರಿಯಾಗಬೇಕು ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಆಗ್ರಹಿಸಿದ್ದಾರೆ.
ಹಣ ಬಲದಿಂದ ಚುನಾವಣೆಗೆ ಗೆಲ್ಲುತ್ತಿರು ವುದರಿಂದಲೇ ದೇಶದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಅದಕ್ಕೆ ಕಡಿವಾಣ ಬೀಳಬೇಕಾದರೆ ಭ್ರಷ್ಟಾಚಾರಿಗಳು ಜೀವನ ಪರ್ಯಂತ ಚುನಾವಣೆಗೆ ಸ್ಪರ್ಧೆ ಮಾಡದಂತಾಗಬೇಕು ಎಂದು ಹೇಳಿದರು.
ಪ್ರಬಲ ಲೋಕಪಾಲ್ ಜಾರಿಗೆ ಒತ್ತಾಯಿಸಿ ದೇಶವ್ಯಾಪಿ ಹೋರಾಟ ನಡೆದಾಗ ಅದನ್ನು ಮೋದಿ ಬೆಂಬಲಿಸಿದ್ದರು. ಆದರೆ ಪ್ರಧಾನಿ ಯಾದ ಮೇಲೆ ಜನ್ಲೋಕಪಾಲ್ ಜಾರಿಯ ಬಗ್ಗೆ ಮಾತನಾಡುತ್ತಿಲ್ಲ ಎಂದು ಟೀಕಿಸಿದರು.
ಲೋಕಾಯುಕ್ತ ಇಲಾಖೆ ಈ ಹಿಂದೆ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿತ್ತು. ಭಷ್ಟ ರಾಜಕಾರಣಿಗಳಿಗೆ ಇದು ತೂಗುಗತ್ತಿಯಾಗಿತ್ತು. ಇಂತಹ ಲೋಕಾಯುಕ್ತವನ್ನು ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ದುರ್ಬಲ ಗೊಳಿಸಿ ಎಸಿಬಿ ರಚನೆ ಮಾಡಿರುವುದು ಸರಿ ಅಲ್ಲ. ವಿರೋಧ ಪಕ್ಷದ ನಾಯಕರಾಗಿದ್ದ ವೇಳೆ ಸಂತೋಷ್ ಹೆಗ್ಡೆ ಕಾರ್ಯವೈಖರಿಯನ್ನು ಹೊಗಳಿದವರು ಈಗ ಇಡೀ ಲೋಕಾಯುಕ್ತ ವನ್ನೇ ಹಲ್ಲು ಕಿತ್ತ ಹಾವು ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.