ನವೀನ್ ಮೃತದೇಹ ತರುವುದು ಕಷ್ಟ: ಶಾಸಕ ಅರವಿಂದ ಬೆಲ್ಲದ
Team Udayavani, Mar 3, 2022, 11:00 PM IST
ಧಾರವಾಡ: ಉಕ್ರೇನ್ ಪರಿಸ್ಥಿತಿ ಕಠಿಣವಾಗಿದ್ದು, ಭಾರತ ಸರ್ಕಾರ ಸಾಕಷ್ಟು ಶ್ರಮ ವಹಿಸಿ ಭಾರತೀಯರನ್ನು ರಕ್ಷಣೆ ಮಾಡುತ್ತಿದೆ. ಅದರ ಜತೆಗೆ ನವೀನ್ ಶವವನ್ನೂ ತರಲು ಪ್ರಯತ್ನ ನಡೆಯುತ್ತಿದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಜೀವಂತ ಇರುವ ವಿದ್ಯಾರ್ಥಿಗಳನ್ನೇ ಕರೆತರುವುದು ಕಠಿಣವಾಗಿದೆ. ಇನ್ನು ಶವ ತರುವುದು ಸ್ವಲ್ಪ ಕಷ್ಟದ ಕೆಲಸ. ಸ್ವಯಂ ಪ್ರಧಾನಿ ಮೋದಿ ಅವರೇ ಈ ಬಗ್ಗೆ ಮುತುವರ್ಜಿ ವಹಿಸಿದ್ದಾರೆ. ರೊಮೇನಿಯಾಕ್ಕೆ ಬಂದ ವಿದ್ಯಾರ್ಥಿಗಳಿಗೆ ನಮ್ಮ ವಿದೇಶಾಂಗ ಇಲಾಖೆ ಊಟ, ವಸತಿ ವ್ಯವಸ್ಥೆ ಮಾಡುತ್ತಿದೆ. ವಿಮಾನದಲ್ಲಿ ಶವ ತರಬೇಕಾದರೆ ಹೆಚ್ಚು ಜಾಗಬೇಕು. ಅದೇ ಜಾಗದಲ್ಲಿ ಜೀವಂತ ಇರುವ 8-10 ಜನರನ್ನು ಸುರಕ್ಷಿತವಾಗಿ ಕರೆತರಬಹುದು. ಒಟ್ಟಿನಲ್ಲಿ ನವೀನ್ ಪಾರ್ಥಿವ ಶರೀರವನ್ನು ತರಲು ಪ್ರಯತ್ನ ನಡೆದಿದೆ ಎಂದರು.
ನಮ್ಮ ದೇಶದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚಿನ ವೆಚ್ಚವಾಗಲಿದ್ದು, ಆ ಕಾರಣಕ್ಕೆ ವಿದ್ಯಾರ್ಥಿಗಳು ಉಕ್ರೇನ್ ದೇಶಕ್ಕೆ ಹೋಗುತ್ತಿದ್ದಾರೆ. ನಮ್ಮಲ್ಲಿ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಇದೆ. ಇದೊಂದು ಖಾಸಗಿ ಸಂಸ್ಥೆಯಾಗಿರುವುದರಿಂದ ಎಂಬಿಬಿಎಸ್ ಸೀಟಿನ ಕೃತಕ ಅಭಾವ ಸೃಷ್ಟಿಯಾಗಿದೆ. ಅದರಲ್ಲೂ ಭ್ರಷ್ಟಾಚಾರ ಇರುತ್ತದೆ. ಇದರ ಮೇಲೆ ಕ್ರಮ ಕೈಗೊಳ್ಳುವ ಕೆಲಸ ಆಗಬೇಕಿದೆ. ಬೇರೆ ರಾಷ್ಟ್ರದಂತೆ ನಮ್ಮ ರಾಷ್ಟ್ರದಲ್ಲೂ ಕಡಿಮೆ ಖರ್ಚಿನಲ್ಲಿ ವಿದ್ಯಾರ್ಥಿಗಳು ಮೆಡಿಕಲ್ ಕಲಿಯುವಂತಾಗಬೇಕು ಎಂದರು.