ಮಳೆ ಅನಾಹುತ ತಡೆಯಲು ಸೂಕ್ತ ಸಿದ್ಧತೆಗೆ ಸೂಚನೆ
Team Udayavani, Jun 3, 2021, 9:14 PM IST
ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಬೃಹತ್ ಬೆಂಗಳೂರು ವ್ಯಾಪ್ತಿಯಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತಂತೆ ಚರ್ಚೆ ನಡೆಸಿದರು.
ಆ ನಂತರದಲ್ಲಿ ಮಾಧ್ಯಮಗಳಿಗೆ ಈ ಕುರಿತಂತೆ ಮಾಹಿತಿ ನೀಡಿದ ಕಂದಾಯ ಸಚಿವ ಆರ್ ಅಶೋಕ,”ಈಗಾಗಲೇ ಮುನ್ನೆಚ್ಚರಿಕಾ ಕ್ರಮವಾಗಿ ಸಾಕಷ್ಟು ಮುನ್ನೆಚ್ಚರಿಕೆಗಳನ್ನ ತೆಗೆದುಕೊಳ್ಳಲಾಗಿದೆ. ಈ ತಿಂಗಳ ಒಳಗಾಗಿ ಎಲ್ಲಾ ಸಿದ್ಧತೆಗಳು ಪೂರ್ಣಗೊಳ್ಳಲಿವೆ. ನಗರದಲ್ಲಿ ಸುಮಾರು 300 ಪ್ರದೇಶಗಳು ಭಾರೀ ಮಳೆಗೆ ತುಂಬಿಕೊಳ್ಳುತ್ತವೆ. ಅದರಲ್ಲಿ 60 ಸ್ಥಳಗಳಲ್ಲಿ ಅತೀ ಹೆಚ್ಚು ನೀರು ತುಂಬಿಕೊಳ್ಳುತ್ತದೆ. ಈ ನಿಟ್ಟಿನಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ಗುಂಡಿಗಳ ಹೂಳು ತೆಗೆಯಲಾಗುವುದು. ರೈಲ್ವೆ ಸೇತುವೆ ಕೆಳಗಡೆಯೂ ನೀರು ತುಂಬಿ ಕೊಳ್ಳುವ ಹಿನ್ನೆಲೆಯಲ್ಲಿ ಅಲ್ಲಿಯೂ ಸ್ವಚ್ಛತೆ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು. ಹಾಗೆಯೇ ಮಳೆ ಬಂದು ಅನಾಹುತಗಳು ಸಂಭವಿಸಿದ ಸಮಯದಲ್ಲಿ ನೆರವಿಗಾಗಿ 24/7 ಕಂಟ್ರೋಲ್ ರೂಮ್ ತೆರೆಯಲಾಗುತ್ತದೆ. ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲೂ ಟಾಸ್ಕಫೋರ್ಸ ರಚನೆ ಮಾಡಲಾಗುವುದು. ಆ ತಂಡಕ್ಕೆ ಬೇಕಾದ ಸಿಬ್ಬಂದಿ, ವಾಹನ ಮತ್ತು ಸಲಕರಣೆಗಳ ಸಿದ್ಧತೆ ಮಾಡಲು ಸೂಚನೆ ನೀಡಲಾಗಿದೆ. ಹಾಗೆಯೇ ಅದಕ್ಕೆ ಬೇಕಾದ ಹಣಕಾಸು ನೆರವನ್ನು ಬಿಡುಗಡೆ ಮಾಡಲಾಗಿದೆ”, ಎಂದು ತಿಳಿಸಿದರು.
ಇದನ್ನೂ ಓದಿ: ಶಿಲ್ಪನಾಗ್ ರಾಜೀನಾಮೆಯ ಹಿಂದಿನ ಕಾರಣವನ್ನು ತಿಳಿಯುವ ಪ್ರಯತ್ನ ಮಾಡುತ್ತೇನೆ:ಎಸ್.ಟಿ.ಸೋಮಶೇಖರ್
“ನಿಂತ ನೀರನ್ನ ಹೊರ ಚೆಲ್ಲಲು ಹೈ ಪ್ರೆಷರ್ ಪಂಪ್ ಗಳನ್ ಬಳಸಲು ಸೂಚಿಸಲಾಗಿದೆ. ಮಳೆ ನೀರು ಚರಂಡಿಗಳಲ್ಲಿನ ಹೂಳು ತೆಗೆದು ಸರಾಗವಾಗಿ ನೀರು ಹರಿದು ಹೋಗುವಂತೆ ಮಾಡಲು ತಿಳಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲಾ ಅಗತ್ಯ ಕ್ರಮಗಳನ್ನ ತೆಗೆದುಕೊಂಡು ಕಾಮಗಾರಿಯನ್ನ ಈ ತಿಂಗಳೊಳಗೆ ಪೂರ್ಣಗೊಳಿಸಿ, ಯಾವುದೇ ಅನಾಹುತವಾಗದಂತೆ ಎಚ್ಚರಿಕೆ ವಹಿಸಬೇಕು. ಹಾಗೆಯೇ ರಕ್ಷಣಾ ತಂಡವು ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಸದಾ ಸನ್ನದ್ಧವಾಗಿರುವಂತೆ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ,” ಎಂದು ಆರ್ ಅಶೋಕ ಮಾಹಿತಿ ನೀಡಿದರು.