ಫೋಟೊ ವೈರಲ್: ಯುವಕ ಸೆರೆ
Team Udayavani, Mar 21, 2020, 3:04 AM IST
ಬೆಳಗಾವಿ: ತನ್ನ ದೊಡ್ಡಪ್ಪನ ಮಗನಿಗೆ ಕೊರೊನಾ ಸೋಂಕು ತಗುಲಿದ್ದು, ಕೆಎಲ್ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ವೈರಲ್ ಮಾಡಿದ್ದ ಯುವಕನನ್ನು ಮಾಳಮಾರುತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಳೆಯ ಗಾಂಧಿ ನಗರದ ನಿವಾಸಿ ಮೇಘನ ಅಶೋಕ ಕಣಬರಕರ ಬಂಧಿತ ಯುವಕ. ಈತ ಮಹಾರಾಷ್ಟ್ರ ಏಕೀಕರಣ ಸಮಿತಿ ಕಾರ್ಯಕರ್ತ ಸೂರಜ ಕಣಬರಕರ ಭಾವಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಅವನಿಗೆ ಸೋಂಕು ತಗುಲಿದೆ.
ಬೆಳಗಾವಿಯ ಮೊದಲ ವ್ಯಕ್ತಿಗೆ ಸೊಂಕು ದೃಢಪಟ್ಟಿದೆ ಎಂದು ಸುಳ್ಳು ಸುದ್ದಿ ವೈರಲ್ ಮಾಡಿದ್ದ. ಈ ಬಗ್ಗೆ ಮಾಳಮಾರುತಿ ಠಾಣೆಯಲ್ಲಿ ಸೂರಜ ದೂರು ದಾಖಲಿಸಿದ್ದರು. ಪೊಲೀಸರಿಗೆ ಮೇಘನ ಕೃತ್ಯ ಎಸಗಿರುವುದು ತಿಳಿದು ಬಂದಿದೆ. ಮೇಘನ ಹಾಗೂ ಸೂರಜ ಕುಟುಂಬಗಳ ಮಧ್ಯೆ ಆಸ್ತಿ ಹಂಚಿಕೆ ವಿವಾದ ಇದೆ. ಸೂರಜನ ಹೆಸರಿಗೆ ಚ್ಯುತಿ ತರುವ ಉದ್ದೇಶದಿಂದ ಮೇಘನ ಈ ರೀತಿ ಸುಳ್ಳು ಸುದ್ದಿ ಹರಡಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.