ಜಿಲ್ಲಾ ಉಸ್ತುವಾರಿ ಸಚಿವರ ಮರು ನೇಮಕ ರದ್ದು: ಆನಂದ್ ಸಿಂಗ್ ಕೊಪ್ಪಳಕ್ಕೇ !
ಸರಕಾರದ ಸ್ಥಿರತೆಯ ಕುರಿತು ಪ್ರಶ್ನೆ ಎತ್ತಿದ ಸಾರ್ವಜನಿಕರು, ವಿಪಕ್ಷಗಳು...
Team Udayavani, Jul 30, 2022, 7:31 PM IST
ಬೆಂಗಳೂರು: ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಆನಂದ್ ಸಿಂಗ್ ಅವರನ್ನು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿ, ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶಶಿಕಲಾ ಜೊಲ್ಲೆ ಅವರನ್ನು ಕೊಪ್ಪಳ ಜಿಲ್ಲೆಗೆ ನೇಮಕ ಮಾಡಿ ಶನಿವಾರ ಬೆಳಗ್ಗೆ ರಾಜ್ಯ ಸರಕಾರ ಆದೇಶ ಹೊರಡಿಸಿತ್ತು. ಆದರೆ ಸಂಜೆ ಆ ಆದೇಶವನ್ನು ರದ್ದು ಮಾಡಲಾಗಿದ್ದು, ಈ ನಡೆ ಸರಕಾರವನ್ನು ಟೀಕೆಗೆ ಗುರಿಯಾಗುವಂತೆ ಮಾಡಿದೆ.
ಇದೇ ರೀತಿ ಕೊಪ್ಪಳ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ಆನಂದ್ ಸಿಂಗ್ ಅವರನ್ನು ವಿಜಯನಗರ ಜಿಲ್ಲೆಗೆ, ಗದಗ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ಶಶಿಕಲಾ ಜೊಲ್ಲೆ ಅವರನ್ನು ಕೊಪ್ಪಳ ಜಿಲ್ಲೆಗೆ ನೇಮಕ ಮಾಡಿ ಆದೇಶ ಹೊರಡಿಸಲಾಗಿತ್ತು. ಇದೀಗ ಏಕಾಏಕಿ ಆದೇಶವನ್ನು ರದ್ದು ಮಾಡಲಾಗಿದ್ದು ಯಥಾಸ್ಥಿತಿಯಲ್ಲಿ ಉಸ್ತುವಾರಿ ಸಚಿವರಾಗಿ ಮುಂದುವರೆಯಲಿದ್ದಾರೆ ಎಂದು ಮರು ಆದೇಶದಲ್ಲಿ ಹೇಳಲಾಗಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಕಾರಣವಾಗಿದೆ.
ತವರು ಜಿಲ್ಲೆಯ ಉಸ್ತುವಾರಿ ನೀಡಬೇಕು ಎಂದು ಆನಂದ್ ಸಿಂಗ್ ಪಟ್ಟು ಹಿಡಿದಿದ್ದರು ಎಂದು ತಿಳಿದು ಬಂದಿತ್ತು, ಆದರೆ ಮತ್ತೆ ಮರು ಆದೇಶ ಹೊರಡಿಸಿರುವ ಕುರಿತು ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂದು ಕಾದು ನೋಡಬೇಕಾಗಿದೆ.