ಕೊಳೆತ ಬೆಳೆ ಸಿಗದ ಪರಿಹಾರ; ಸುರಿದ ದಾಖಲೆ ಮಳೆಗೆ ಬೀದಿಪಾಲಾಗಿದೆ ರೈತನ ಬದುಕು
ಹಲವು ಜಿಲ್ಲೆಗಳಲ್ಲಿ ಪರಿಹಾರ ಕಾಮಗಾರಿ ನಡೆದಿಲ್ಲ
Team Udayavani, Sep 14, 2022, 7:05 AM IST
ಬೆಂಗಳೂರು: ರಾಜ್ಯದಲ್ಲಿ ಜುಲೈ ನಿಂದ ಈ ತಿಂಗಳ ಮೊದಲ ವಾರದವರೆಗೆ ಸುರಿದ ದಾಖಲೆ ಪ್ರಮಾಣದ ಮಳೆಗೆ ಲಕ್ಷಾಂತರ ಹೆಕ್ಟೇರ್ ಬೆಳೆ ನಾಶವಾಗಿದೆ. ಆದರೆ ನ್ಯಾಯಯುತ ಪರಿಹಾರವೂ ಸಿಕ್ಕಿಲ್ಲ ಎಂಬಂತಾಗಿದೆ.
ಮೂರು ತಿಂಗಳಿಂದ ಮಳೆ ಸುರಿಯುತ್ತಿದ್ದು, ಕೆರೆಗಳು ತುಂಬಿವೆ. ಬರ ಪೀಡಿತ ಪ್ರದೇಶಗಳಲ್ಲೂ ಕೆರೆಗಳು ತುಂಬಿರುವುದು ದಾಖಲೆ. ಆಗಸ್ಟ್ ನಲ್ಲಿ ಶೇ. 144ರಷ್ಟು ಹೆಚ್ಚು ಮಳೆಯಾಗಿದೆ. ಈ ತಿಂಗಳ ಮೊದಲ ವಾರದಲ್ಲೇ ಶೇ. 51ರಷ್ಟು ಹೆಚ್ಚು ಮಳೆಯಾಗಿದೆ. ಅತಿಯಾದ ಮಳೆಯಲ್ಲಿ ಬೆಳೆ ಕೊಳೆತು ರೈತನಿಗೆ ಸಂಕಷ್ಟ ತಂದೊಡ್ಡಿದೆ. ಬಿತ್ತಿದ ಬೆಳೆ ಕೈಗೆ ಸಿಗದೇ ನಷ್ಟವಾಗಿರುವುದು ಒಂದೆಡೆಯಾದರೆ, ಸೂಕ್ತ ಪರಿಹಾರವೂ ಸಿಗದಿರುವುದು ಇನ್ನೊಂದೆಡೆ. ಇದರೊಂದಿಗೆ ಅಪಾರ ಬೆಳೆ ನಷ್ಟ ವಾಗಿರುವುದರಿಂದ ಆಹಾರ ಉತ್ಪಾದನೆ ಮೇಲೂ ಪರಿಣಾಮ ಬೀರಲಿದೆ.
ರಾಜ್ಯ ಸರಕಾರದ ಅಂಕಿ-ಅಂಶಗಳ ಪ್ರಕಾರವೇ 5.39 ಲಕ್ಷ ಹೆಕ್ಟೇರ್ ಕೃಷಿ ಹಾಗೂ ತೋಟಗಾರಿಕೆ, 60 ಸಾವಿರ ಹೆಕ್ಟೇರ್ ವಾಣಿಜ್ಯ ಬೆಳೆ ಮಳೆ ಹಾಗೂ ನೆರೆಗೆ ಕೊಚ್ಚಿ ಹೋಗಿದೆ.
ಸಮರ್ಪಕ ವಿತರಣೆ ಇಲ್ಲ
ರಾಜ್ಯ ಸರಕಾರವು ಕೇಂದ್ರ ಸರಕಾರದ ಮಾರ್ಗ ಸೂಚಿ ದರದ ಜತೆಗೆ ಹೆಚ್ಚುವರಿಯಾಗಿ ಪರಿಹಾರ ಕೊಡುತ್ತಿದ್ದೇವೆ ಎಂದಿದ್ದರೂ ಸಮ ರ್ಪಕವಾಗಿ ವಿತರಣೆಯಾಗಿಲ್ಲ ಎಂಬುದು “ಉದಯವಾಣಿ’ ರಿಯಾಲಿಟಿ ಚೆಕ್ನಲ್ಲಿ ಕಂಡು ಬಂದಿದೆ.
ಮಳೆಯಿಂದ ಹಾನಿಗೊಳಗಾದ ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ತುಮಕೂರು, ಬೆಳಗಾವಿ, ಗದಗ, ಕಲಬುರಗಿ, ಬೀದರ್ ಸೇರಿ ಬಹುತೇಕ ಜಿಲ್ಲೆಗಳಲ್ಲಿ ಉಸ್ತುವಾರಿ ಸಚಿವರು ಹಾಗೂ ಶಾಸಕರು ಪರಿಹಾರದ ಬಗ್ಗೆ ಹೆಚ್ಚು ಗಮನವನ್ನೇ ಕೊಟ್ಟಿಲ್ಲ. ಜಿಲ್ಲಾಧಿಕಾರಿಗಳು ಕೃಷಿ ಮತ್ತು¤ ತೋಟಗಾರಿಕೆ ಅಧಿಕಾರಿಗಳ ನೆರವಿನಿಂದ ಪ್ರತೀ ಜಿಲ್ಲೆಯಲ್ಲಿ ಮಳೆಯಿಂದ ಉಂಟಾದ ಹಾನಿಯ ಬಗ್ಗೆ ವರದಿ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಿದ್ದಾರೆ. ಆದರೆ ರೈತರಿಗೆ ಪರಿಹಾರ ಸಿಕ್ಕಿಲ್ಲ. ಅಷ್ಟೇ ಅಲ್ಲ, ಮಳೆಯಿಂದ ಮನೆ ಕಳೆದು ಕೊಂಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮಳೆ ಪರಿಹಾರ, ತುರ್ತು ಕಾಮಗಾರಿಗಳಿಗಾಗಿ ಜಿಲ್ಲಾಧಿಕಾರಿಗಳ ಪಿಡಿ ಅಕೌಂಟ್ನಲ್ಲಿ 664 ಕೋಟಿ ರೂ.ಗಳಿವೆ. ರಾಜ್ಯದ ಪ್ರವಾಹ ನಿರ್ವಹಣೆಗೆ, ಮೂಲ ಸೌಕರ್ಯಗಳಿಗೆ 600 ಕೋಟಿ ರೂ. ಬಿಡುಗಡೆ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ಮುಖ್ಯಮಂತ್ರಿಯವರು ತಿಳಿಸಿದ್ದಾರೆ. ಆದರೆ ಪರಿಹಾರ ಹಾಗೂ ತುರ್ತು ಕಾಮಗಾರಿಗಳು ನಿರೀಕ್ಷಿತ ಪ್ರಮಾಣದಲ್ಲಿ ಯಾವ ಜಿಲ್ಲೆಯಲ್ಲೂ ನಡೆಯುತ್ತಿಲ್ಲ ಎಂಬುದು ಪತ್ರಿಕೆಯ ರಿಯಾಲಿಟಿ ಚೆಕ್ನಲ್ಲಿ ಪತ್ತೆಯಾಗಿದೆ.
ಹಾಸನ, ದಾವಣಗೆರೆ, ಯಾದಗಿರಿ ಜಿಲ್ಲೆಯಲ್ಲಿ ಪರಿಹಾರಕ್ಕೆ ಇನ್ನೂ ಅಂತಿಮ ಪ್ರಸ್ತಾವನೆ ಸಲ್ಲಿಕೆಯಾಗಿಲ್ಲ. ಚಿಕ್ಕಮಗಳೂರಿನಲ್ಲಿ ಶೇ. 90ರಷ್ಟು ಪರಿಹಾರ ವಿತರಣೆಯಾಗಿದೆ. ಕೊಪ್ಪಳ ದಲ್ಲಿ ಪರಿಹಾರ ವಿತರಣೆ ಪ್ರಗತಿಯಲ್ಲಿದೆ.
6 ಸಾವಿರ ಕೋಟಿ ರೂ. ನಷ್ಟ?
ರಾಜ್ಯ ಸರಕಾರವು ಪ್ರಾಥಮಿಕವಾಗಿ ಅಂದಾಜು ಮಾಡಿರುವ ಪ್ರಕಾರ ಬೆಳೆ ನಷ್ಟದ ಪ್ರಮಾಣವೇ 3,056 ಕೋಟಿ ರೂ. ಎಂದು ಹೇಳಿದ್ದರೂ 5-6 ಸಾವಿರ ಕೋಟಿ ರೂ. ತಲುಪುವ ಸಾಧ್ಯತೆ ಇದೆ. ರಾಜ್ಯ ಸರಕಾರವು ಕೇಂದ್ರ ಸರಕಾರದಿಂದ ಎನ್ಡಿಆರ್ಎಫ್ ಮಾರ್ಗಸೂಚಿಯಡಿ 1,200 ಕೋಟಿ ರೂ. ನೆರವಿಗಾಗಿ ಪ್ರಸ್ತಾವ ಸಲ್ಲಿಸಿದೆ. ಇತ್ತೀಚೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರವಾಹ ಪೀಡಿತ ಪ್ರದೇಶಗಳ ಜಿಲ್ಲಾಧಿ ಕಾರಿಗಳ ಜತೆ ಸಭೆ ನಡೆಸಿದ್ದರು. ಬೆಳೆ ನಷ್ಟ, ಮೂಲಸೌಕರ್ಯ ಹಾನಿ ಸೇರಿ 11 ಸಾವಿರ ಕೋಟಿ ರೂ.ವರೆಗೆ ಹಾನಿಯಾಗಿದೆ. ಈ ಬಗ್ಗೆ ಕೇಂದ್ರಕ್ಕೆ ಪರಿಹಾರಕ್ಕಾಗಿ ಮನವಿ ಸಲ್ಲಿಸಿದ್ದೇವೆ ಎಂದಿದ್ದರು.
ಮಳೆ ಹಾನಿಯ ಸಮೀಕ್ಷೆಗಾಗಿ ರಾಜ್ಯಕ್ಕೆ ಬಂದಿದ್ದ ಅಧಿಕಾರಿಗಳ ತಂಡಕ್ಕೂ ಹಾನಿ ಹಾಗೂ ನಷ್ಟದ ಬಗ್ಗೆ ಸಮಗ್ರ ವರದಿ ನೀಡಿ ವಿಶೇಷ ಪ್ರಕರಣ ಎಂದು ಪರಿಗಣಿಸಿ ಹೆಚ್ಚು ಅನುದಾನ ಬಿಡುಗಡೆಗೆ ಶಿಫಾರಸು ಮಾಡುವಂತೆ ಕೋರಿದ್ದರು.
ಆದರೆ ಕಳೆದ ಐದು ವರ್ಷಗಳ ಅಂಕಿ-ಅಂಶ ಗಮನಿಸಿದರೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ಪ್ರಸ್ತಾವನೆಯ ಪೈಕಿ ಶೇ.50 ರಷ್ಟೂ ಬಂದಿಲ್ಲ. ಕೆಲವು ವರ್ಷ ಶೇ.50 ಕ್ಕಿಂತ ಕಡಿಮೆ ಬಂದಿದ್ದೂ ಇದೆ. ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿ ಅದು ರೈತನ ಖಾತೆಗೆ ತಲುಪುವಷ್ಟರಲ್ಲಿ ಸಾಲ ಮಾಡಿ ಬೆಳೆ ಹಾಕಿದ ರೈತನ ಆರ್ಥಿಕ ಸ್ಥಿತಿ ಚಿಂತಾಜನಕವಾಗುತ್ತಿದೆ.
ರಾಜಕಾಲುವೆ ತೆರವು ನಿರಂತರ ಪ್ರಕ್ರಿಯೆ
ಬೆಂಗಳೂರು: ರಾಜ ಕಾಲುವೆ ತೆರವು ಕಾರ್ಯ ನಿರಂತರವಾಗಿ ನಡೆಸ ಲಾಗು ತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಅವರು, ನಗರದ ಎಲ್ಲೆಡೆ ಈ ಸಮಸ್ಯೆ ಇಲ್ಲ. ಮಹದೇವಪುರ ಭಾಗದಲ್ಲಿ ಹೆಚ್ಚಿನ ಸಮಸ್ಯೆಯಾಗಿದೆ ಎಂದರು. ರಾಜಕಾಲುವೆ ನಿರ್ಮಾಣದ ಬಾಕಿ ಇರುವ 300 ಕಿ.ಮೀ. ಯೋಜನೆಯನ್ನೂ ಶೀಘ್ರವೇ ಕೈಗೆತ್ತಿಕೊಳ್ಳಲು ಸೂಚಿಸಲಾಗುವುದು ಎಂದರು.
ಇದೇ ವೇಳೆ, ರಾಜ್ಯ ಸರಕಾರ ಪ್ರವಾಹ ಪರಿಸ್ಥಿತಿ ಎದುರಿಸಲು ಮುಂಜಾಗ್ರತಾಕ್ರಮ ಕೈಗೊಳ್ಳದ ಕಾರಣ ಜನತೆ ಸಂಕಷ್ಟಕ್ಕೆ ಸಿಲುಕಿದೆ. ಇದಕ್ಕೆ ರಾಜ್ಯ ಸರಕಾರದ ಬೇಜವಾಬ್ದಾರಿಯೇ ಕಾರಣ ಎಂದು ವಿಪಕ್ಷ ನಾಯಕ ಸಿದ್ದರಾ ಮಯ್ಯ ಆರೋಪಿಸಿದರು. ರಾಜ್ಯ ಸರಕಾರವು ಬೆಂಗಳೂರು ಸೇರಿದಂತೆ ರಾಜ್ಯಾ ದ್ಯಂತ ನೆರೆ ಪರಿಸ್ಥಿತಿ ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್ ತೀರ್ಪು
MUST WATCH
ಹೊಸ ಸೇರ್ಪಡೆ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ
Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ