ರೂಪಾ, ರೋಹಿಣಿ ಅಮಾನತಿಗೆ ವಿಶ್ವನಾಥ್ ಆಗ್ರಹ
Team Udayavani, Feb 23, 2023, 6:15 AM IST
ಬೆಂಗಳೂರು: ನಾಡಿನ ಆಡಳಿತ ಮತ್ತು ಅಭಿವೃದ್ಧಿಗೆ ಮಾರಕವಾಗಿರುವ ಐಪಿಎಸ್ ರೂಪಾ ಮೌದ್ಗಿಲ್ ಮತ್ತು ಐಎಎಸ್ ರೋಹಿಣಿ ಸಿಂಧೂರಿ ಈ ಇಬ್ಬರು ಮಹಿಳಾ ಅಧಿಕಾರಿಗಳನ್ನು ಸರಕಾರ ತತ್ಕ್ಷಣ ಅಮಾನತುಗೊಳಿಸಿ ವಿಚಾರಣೆ ನಡೆಸಿ ಸೂಕ್ತ ಕಾನೂನು ಕ್ರಮ ಜರಗಿಸಬೇಕು ಎಂದು ಬಿಜೆಪಿಯ ಎಚ್. ವಿಶ್ವನಾಥ್ ಒತ್ತಾಯಿಸಿದ್ದಾರೆ.
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾವಿಸಿದ ಎಚ್. ವಿಶ್ವನಾಥ್, ಐಪಿಎಸ್ ಅಧಿಕಾರಿ ರೂಪಾ ಡಿ. ಮೌದ್ಗಿಲ್ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಇವರಿಬ್ಬರ ಬೀದಿ ಕಾಳಗ ಮಾಧ್ಯಮಗಳಲ್ಲಿ ಧಾರವಾಹಿಯಾಗಿ ಮುಂದುವರಿದಿದೆ.
ರೋಹಿಣಿ ಸಿಂಧೂರಿ ಮತ್ತು ಶಾಸಕ ಸಾ.ರಾ. ಮಹೇಶ್ ನಡುವಿನ ಆರೋಪಗಳ ಬಗ್ಗೆ ಸಂಧಾನವನ್ನು ಖಾಸಗಿ ಹೊಟೇಲ್ನಲ್ಲಿ ನಡೆಸುತ್ತಿರುವ ಐಎಎಸ್ ಅಧಿಕಾರಿ ಪಿ. ಮಣಿವಣ್ಣನ್ ಅವರಿಗೆ ಸರಕಾರ ಅಧಿಕಾರ ಕೊಟ್ಟಿದೆಯಾ? ರೋಹಿಣಿ ಸಿಂಧೂರಿ ವಿರುದ್ಧ ಸಾ.ರಾ. ಮಹೇಶ್ ಮಾಡಿರುವ ಆರೋಪಗಳು ಇನ್ನೂ ಮುಕ್ತಾಯವಾಗದೇ ಇರುವಂತಹ ಸಂದರ್ಭ ಸಂಧಾನಕ್ಕೆ ಪ್ರಯತ್ನಿಸಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಇದಕ್ಕೆ ಸರಕಾರದ ಪರ ಉತ್ತರಿಸಿದ ಸಚಿವ ಡಾ| ಸಿ.ಎನ್. ಅಶ್ವತ್ಥನಾರಾಯಣ, ಈಗಾಗಲೇ ಇಬ್ಬರು ಅಧಿಕಾರಿಗಳನ್ನು ಸ್ಥಳ ನಿಯುಕ್ತಿಗೊಳಿಸದೇ ವರ್ಗಾವಣೆ ಮಾಡಲಾಗಿದೆ. ಇಬ್ಬರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದರು.