ಕೆಎಸ್ಆರ್ಟಿಯ 283 ಚಾಲಕರಿಗೆ ಬೆಳ್ಳಿಪದಕ
Team Udayavani, Jan 20, 2019, 12:45 AM IST
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ)ಯು ಅಪಘಾತರಹಿತ ಮತ್ತು ಅಪರಾಧರಹಿತ ಚಾಲಕರಿಗೆ ಗಣರಾಜ್ಯೋತ್ಸವದ ಅಂಗವಾಗಿ ಬೆಳ್ಳಿಪದಕ ನೀಡಲಿದ್ದು, ಪ್ರಸಕ್ತ ಸಾಲಿನಲ್ಲಿ 283 ಚಾಲಕರು ಈ ಸನ್ಮಾನಕ್ಕೆ ಭಾಜನರಾಗಿದ್ದಾರೆ.
ನಿಗಮದ ವ್ಯಾಪ್ತಿಯ 17 ವಿಭಾಗಗಳಲ್ಲಿ ಕಳೆದ ಐದು ವರ್ಷಗಳಿಂದ ಅಪಘಾತರಹಿತ ಮತ್ತು ಅಪರಾಧರಹಿತ ಸೇವೆ ಸಲ್ಲಿಸಿದ ಒಟ್ಟಾರೆ 283 ಚಾಲಕ-ಕಂ-ನಿರ್ವಾಹಕರಿಗೆ “ಸುರಕ್ಷತಾ ಚಾಲಕ’ ಎಂಬ ಬಿರುದು ನೀಡಿ, ಗಂಡಭೇರುಂಡ ಲಾಂಛನವುಳ್ಳ 32 ಗ್ರಾಂ ಬೆಳ್ಳಿಪದಕ ಹಾಗೂ ಎರಡು ಸಾವಿರ ನಗದು ಮತ್ತು ಪ್ರಶಂಸನಾ ಪತ್ರ ನೀಡಿ ಗೌರವಿಸಲಾಗುವುದು. ಜತೆಗೆ ಮಾಸಿಕ 50 ರೂ. ಪ್ರೋತ್ಸಾಹ ಭತ್ಯೆಯನ್ನೂ ನೀಡಲಾಗುತ್ತದೆ.
ಬೆಂಗಳೂರು (ಕೇಂದ್ರೀಯ) ವಿಭಾಗದ 32 ಸಿಬ್ಬಂದಿ, ರಾಮನಗರ 17, ತುಮಕೂರು 10, ಕೋಲಾರ 62, ಚಿಕ್ಕಬಳ್ಳಾಪುರ 23, ಮೈಸೂರು ನಗರ 1 ಮತ್ತು ಗ್ರಾಮಾಂತರ 12, ಮಂಡ್ಯ 13, ಚಾಮರಾಜನಗರ 12, ಹಾಸನ 24, ಚಿಕ್ಕಮಗಳೂರು 11, ಮಂಗಳೂರು 6, ಪುತ್ತೂರು 15, ದಾವಣಗೆರೆ 26, ಶಿವಮೊಗ್ಗ 11, ಕೆಂಪೇಗೌಡ ಬಸ್ ನಿಲ್ದಾಣ 2 ಹಾಗೂ ಕೇಂದ್ರ ಕಚೇರಿ ವಿಭಾಗದ 6 ಚಾಲಕ- ಕಂ-ಸಿಬ್ಬಂದಿ ಬೆಳ್ಳಿಪದಕಕ್ಕೆ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.