ಎಸ್ಪಿ ಕಚೇರಿಯ ಆನೆ ದಂತ ನಾಪತ್ತೆ ಪ್ರಕರಣ ಸಿಐಡಿಗೆ
Team Udayavani, Jan 26, 2019, 2:08 AM IST
ಶಿವಮೊಗ್ಗ: ಇಲ್ಲಿನ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನಿಗೂಢ ರೀತಿಯಲ್ಲಿ ನಡೆದಿರುವ ಬಹುಕೋಟಿ ರೂ. ಮೌಲ್ಯದ ಜೋಡಿ ಆನೆ ದಂತ ನಾಪತ್ತೆ ಪ್ರಕರಣವನ್ನು ರಾಜ್ಯ ಸರ್ಕಾರ ಕೊನೆಗೂ ಸಿಐಡಿಗೆ ವಹಿಸಿದೆ.
ಪೊಲೀಸ್ ಇಲಾಖೆಯಲ್ಲಿ ತೀವ್ರ ಸಂಚಲನಕ್ಕೆ ಕಾರಣವಾದ ಈ ಪ್ರಕರಣ ಕುರಿತು ಜಿಲ್ಲಾಮಟ್ಟದಲ್ಲಿ ನಡೆದ ತನಿಖೆಯಾವುದೇ ನಿರೀಕ್ಷಿತ ಪ್ರಗತಿ ಕಾಣಲಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಪ್ರಕರಣದ ಹೆಚ್ಚಿನ ತನಿಖೆಯನ್ನು ಸಿಐಡಿಗೆ ವಹಿಸಿದೆ.
ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಇದೇ ಜ.1ರಂದು ಸಿಐಡಿಗೆ ಪತ್ರ ಬರೆದು(ಪತ್ರ ಸಂಖ್ಯೆ ಡಿಸಿಆರ್ಬಿ/1/19) ಶಿವಮೊಗ್ಗದ ಎಸ್ಪಿ ಕಚೇರಿಯಲ್ಲಿದ್ದ ಜೋಡಿ ದಂತ ನಾಪತ್ತೆ ಪ್ರಕರಣದ ವಿಸ್ತೃತ ತನಿಖೆ ನಡೆಸುವಂತೆ ಕೋರಿದ್ದರು. ಆರಂಭದಲ್ಲಿ ಅಪರ ಎಸ್ಪಿ ಮಟ್ಟದಲ್ಲಿ ನಡೆದ ತನಿಖೆ, ನಂತರ ಜಿಲ್ಲಾಮಟ್ಟದಲ್ಲಿ ನಡೆಯುತ್ತಿತ್ತು. ಇದೀಗ ಸಿಐಡಿ ಕಚೇರಿಯ ಕದ ತಟ್ಟಿದಂತಾಗಿದೆ.