ತಹಸೀಲ್ದಾರ್ ಅಮಾನತು
Team Udayavani, Jun 14, 2019, 5:10 AM IST
ಬೆಂಗಳೂರು: ರೈತರೊಬ್ಬರಿಗೆ ಜಮೀನು ಖಾತೆ ಮಾಡಿಕೊಡಲು ವಿಳಂಬ ಮಾಡಿದ ಆರೋಪದಲ್ಲಿ ಹಿಂದೆ ಕನಕಪುರ ತಹಸೀಲ್ದಾರ್ ಆಗಿದ್ದ ಕೆಎಎಸ್ ಅಧಿಕಾರಿ ಆನಂದಯ್ಯ ಅವರನ್ನು ಹೈಕೋರ್ಟ್ ಸೇವೆಯಿಂದ ಅಮಾನತು ಮಾಡಿದೆ.
ಕನಕಪುರ ತಾಲೂಕಿನ ಹಾರೋಹಳ್ಳಿ ಹೋಬಳಿಯ ಹುಳುಗೊಂಡನಹಳ್ಳಿಯ ಸ.ನಂ.58ಕ್ಕೆ ಸೇರಿದ ಒಟ್ಟು ಜಮೀನಿನಲ್ಲಿ 1 ಎಕರೆ ಜಮೀನಿನ ಖಾತೆ ಮಾಡಿಕೊಡಲು ತಹಸೀಲ್ದಾರ್ ಆನಂದಯ್ಯ ವಿಳಂಬ ಮಾಡಿ ದ್ದಾರೆಂದು ಆರೋಪಿಸಿ ವೆಂಕಟೇಶ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಸ್.ಎನ್. ಸತ್ಯನಾರಾಯಣ ಅವರಿದ್ದ ಏಕಸದಸ್ಯ ನ್ಯಾಯಪೀಠ, ಆನಂದಯ್ಯ ಅವರನ್ನು ಅಮಾನತುಗೊಳಿಸಿ ಗುರುವಾರ ಆದೇಶಿಸಿತು.
ಅರ್ಜಿದಾರ ವೆಂಕಟೇಶ್ ಅವರಿಗೆ ಜಮೀನಿನ ಖಾತೆ ಮಾಡಿಕೊಡಲು ಹೈಕೋರ್ಟ್ ನೀಡಿದ್ದ ಆದೇಶವನ್ನು ಪಾಲಿಸದ ಹಿನ್ನೆಲೆಯಲ್ಲಿ ಆನಂದಯ್ಯ ಅವರನ್ನು ಅಮಾತುಗೊಳಿಸುವಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ನ್ಯಾಯಮೂರ್ತಿಗಳು ನಿರ್ದೇಶನ ನೀಡಿದರು. ಅಲ್ಲದೇ, ಆನಂದಯ್ಯ ವಿರುದ್ಧ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವಂತೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ಸೂಚನೆ ನೀಡಿದರು.
ತಮ್ಮ ತಂದೆ ವೆಂಕಟಪ್ಪ ಅವರಿಗೆ ರಾಜ್ಯ ಸರ್ಕಾರವು 1984ರಲ್ಲಿ ಕನಕಪುರ ತಾಲೂಕಿನ ಹಾರೋಹಳ್ಳಿ ಹೋಬಳಿಯ ಸರ್ವೇ ನಂ-58ರಲ್ಲಿನ ಒಂದು ಎಕರೆ ಜಮೀನು ಮಂಜೂರು ಮಾಡಿತ್ತು. ಭೂ ಪರಿವರ್ತನೆ ಮತ್ತು ಪಹಣಿಪತ್ರದಲ್ಲಿ ಈ ಜಮೀನಿನ ಸರ್ವೇ ನಂಬರ್ ಅನ್ನು ನಮೂದಿಸಬೇಕು ಎಂದು ಕೋರಿ 2017ರಲ್ಲಿ ನಾನು ತಹಸೀಲ್ದಾರ್ ಅವರಿಗೆ ಅರ್ಜಿ ಸಲ್ಲಿಸಿದ್ದೇನೆ. ಆದರೆ, ತಹಸೀಲ್ದಾರ್ ಅವರು ಈವರೆಗೂ ನನ್ನ ಅರ್ಜಿ ಪರಿಗಣಿಸಿ ಯಾವುದೇ ಆದೇಶ ಹೊರಡಿಸಿಲ್ಲ ಎಂದು ಆರೋಪಿಸಿ ವೆಂಕಟೇಶ್ ಎಂಬುವರು ಹೈಕೋರ್ಟ್ ಗೆ 2018ರಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದರು.