ಗಲಭೆಗೆ ಮತೀಯವಾದಿಗಳೇ ಕಾರಣ
Team Udayavani, Jul 14, 2017, 2:45 AM IST
ಕೊಪ್ಪಳ: ಮಂಗಳೂರು ಗಲಭೆಗೆ ಮತೀಯವಾದಿಗಳೇ ಕಾರಣ. ಅವರೇ ಇದನ್ನೆಲ್ಲ ಮಾಡುತ್ತಿದ್ದಾರೆ.ಇದೆಲ್ಲವನ್ನು ಮುಚ್ಚಿಕೊಳ್ಳಲು ಬಿಜೆಪಿಯವರು ಈಗ ತೋಳ-ಕುರಿಯ ನಾಟಕ ಆಡಲು ಶುರು ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ತಾಲೂಕಿನ ಬಸಾಪೂರ ಬಳಿ ಗುರುವಾರ ಸುದ್ದಿ ಗಾರರೊಂದಿಗೆ ಮಾತನಾಡಿ, ದೇಶದಲ್ಲಿ ಕೋಮುವಾದ ಸೃಷ್ಟಿಸುವವರು ಬಿಜೆಪಿ ಹಾಗೂ ಸಂಘ ಪರಿವಾರ. ಕೋಮುವಾದಕ್ಕೆ ಬಿಜೆಪಿಯೇ ಕಾರಣ. ಈಗ ಇನ್ನೊಬ್ಬರ ಮೇಲೆ ಹೇಳುತ್ತಿದ್ದಾರೆ. ಮಂಗಳೂರಿನಲ್ಲಿ ಶಾಂತಿ ಸಭೆ ನಡೆಸುವಂತೆ ಸ್ಥಳೀಯ ಡಿಸಿ, ಸಚಿವ ರಮಾನಾಥ್ ರೈಗೆ ಸೂಚಿಸಿದ್ದೇನೆ ಎಂದರು. ಮಂಗಳೂರು ಗಲಭೆ ನಿಯಂತ್ರಣಕ್ಕೆ ಗೃಹ ಇಲಾಖೆ ಸಲಹೆಗಾರ ಕೆಂಪಯ್ಯ ಅವರನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡಿಲ್ಲ. ಕೆಂಪಯ್ಯ ಅಲ್ಲಿಗೆ ಹೋಗಿಯೇ ಇಲ್ಲ. ಪೊಲೀಸ್ ಮಹಾ ನಿದೇರ್ಶಕ ಆರ್.ಕೆ.ದತ್ತಾ ಹಾಗೂ ಗುಪ್ತಚರ ಇಲಾಖೆ ಹಾಗೂ ಕಾನೂನು ಸುವ್ಯವಸ್ಥೆ ಪಾಲನಾ ಪೊಲೀಸ್ ಅಧಿಕಾರಿಗಳಿಗೆ ತೆರಳುವಂತೆ ಸೂಚಿಸಿದ್ದೇನೆ. ಆರೆಸ್ಸೆಸ್,
ಬಜರಂಗ ದಳ, ಎಸ್ಡಿಪಿಎ, ಶ್ರೀರಾಮಸೇನೆ ಸೇರಿ ಯಾರೇ ಮತೀಯವಾದ ಮಾಡಿದರೂ ಅವುಗಳೆಲ್ಲ ಕೋಮುವಾದಿ ಸಂಘಟನೆಗಳೇ. ಅಂಥವರ ಮೇಲೆ ಕ್ರಮಕ್ಕೆ ಸೂಚನೆ ನೀಡಿದ್ದೇನೆ ಎಂದರು.