31ಕ್ಕೆ ಪಟೇಲ್ ಪ್ರತಿಮೆ ಉದ್ಘಾಟನೆ
Team Udayavani, Oct 15, 2018, 10:50 AM IST
ವಡೋದರಾ: ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಪ್ರತಿಮೆ ನಿರ್ಮಾಣ ಕಾರ್ಯ ಪೂರ್ತಿಯಾಗಿದ್ದು, ಅ.31ಕ್ಕೆ ಉದ್ಘಾಟನೆಯಾಗಲಿದೆ. 182 ಮೀಟರ್ ಎತ್ತರದ ಪ್ರತಿಮೆಗಾಗಿ 2,989 ಕೋಟಿ ರೂ. ವೆಚ್ಚ ಮಾಡಲಾಗಿದೆ. ಅದಕ್ಕೆ ಪೂರಕವಾಗಿ ಪ್ರತಿಮೆ ನಿರ್ಮಾಣವಾಗಿರುವ ನರ್ಮದಾ ಜಿಲ್ಲೆಯ ಕೇವಡಿ ಕಾಲನಿಯಲ್ಲಿರುವ ಸ್ಥಳದಲ್ಲಿ ಎಲ್ಲಾ ರಾಜ್ಯಗಳು ಸಮುದಾಯ ಭವನ, ಅತಿಥಿ ಗೃಹ ನಿರ್ಮಾಣ ಮಾಡಬೇಕು ಎಂದು ಗುಜರಾತ್ ಸಿಎಂ ವಿಜಯ ರೂಪಾಣಿ ಸಲಹೆ ಮಾಡಿದ್ದಾರೆ.
ಎಲ್ಲ ಪ್ರಾಂತ್ಯಗಳನ್ನು ಒಗ್ಗೂಡಿಸಿದ ಸರ್ದಾರ್ ಶ್ರಮದ ದ್ಯೋತಕವಾಗಿ ಈ ಕ್ರಮಕ್ಕೆ ಮುಂದಾಗಬೇಕು ಎಂದು ಸಲಹೆ ಮಾಡಿದ್ದಾರೆ. ಅದರಿಂದಾಗಿ ಕೆವಾಡಿಯಾ ಕಾಲನಿ ಪ್ರಾಂತ್ಯವನ್ನು ಪ್ರವಾಸಿಗರ ಆಕರ್ಷಣೀಯ ತಾಣವಾಗುವಂತೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ. ಅದಕ್ಕಾಗಿ ಪ್ರತಿಮೆ ಇರುವ ಸ್ಥಳದಿಂದ 4 ಕಿ.ಮೀ. ದೂರದಲ್ಲಿ ಜಮೀನನ್ನು ಗುರುತಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.