ಥೀಮ್ ಪಾರ್ಕ್ಗೆ ಡಿಕೆಶಿ ಅಡ್ಡಿಯಾಗಿದ್ದೇಕೆ?
Team Udayavani, Jan 1, 2020, 3:05 AM IST
ಮಂಡ್ಯ: ರಾಮನಗರ ಜಿಲ್ಲೆಯಲ್ಲಿ ಕ್ರಿಸ್ತನ ಪ್ರತಿಮೆ ಸ್ಥಾಪಿಸುವುದಕ್ಕೆ ಮುಂದಾಗಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಹಿಂದೊಮ್ಮೆ ಇಸ್ಕಾನ್ ಸಂಸ್ಥೆ ಥೀಮ್ ಪಾರ್ಕ್ ಮಾಡುವ ಯೋಜನೆಗೆ ಅಡ್ಡಗಾಲಾಗಿ ಶ್ರೀಕೃಷ್ಣನನ್ನು ವಿರೋಧಿಸಿದ್ದೇಕೆ? ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.
ಮದ್ದೂರಿನಲ್ಲಿ ಮಾತನಾಡಿದ ಅವರು, ಇಸ್ಕಾನ್ ಸಂಸ್ಥೆ ಥೀಮ್ ಪಾರ್ಕ್ ಯೋಜನೆ ಕೈಗೆತ್ತಿಕೊಂಡಾಗ ಅಂದು ಸದನ ಸಮಿತಿ ರಚಿಸಿ, ಡಿ.ಕೆ.ಶಿವಕುಮಾರ್ ಇನ್ನಿಲ್ಲದ ತೊಂದರೆ ಕೊಟ್ಟು ಯೋಜನೆ ಕೈಬಿಡುವಂತೆ ಮಾಡಿದ್ದರು. ಏಸುಕ್ರಿಸ್ತನ ಪ್ರತಿಮೆ ನಿರ್ಮಾಣಕ್ಕೆ ಮುಂದಾದವರು, ಅಂದು ಕೃಷ್ಣನಿಗೆ ಏಕೆ ವಿರೋಧಿಸಿದರು. ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಹಚ್ಚುವುದು ಸರಿಯೇ? ಎಂದು ದೂರಿದರು. ನಮಗೆ ಕೃಷ್ಣ, ಏಸುಕ್ರಿಸ್ತ ಇಬ್ಬರೂ ಒಂದೇ.
ಇಬ್ಬರಲ್ಲೂ ಭೇದವಿಲ್ಲ. ದೇವರೊಬ್ಬ ನಾಮ ಹಲವು ಎಂಬ ಮಾತಿನಲ್ಲಿ ನಂಬಿಕೆ ಇಟ್ಟವರು ನಾವು. ಕ್ರಿಸ್ತನ ಪ್ರತಿಮೆ ನಿರ್ಮಿಸುವುದಕ್ಕೆ ಅವರು ಸ್ವತಂತ್ರರು. ಆದರೆ, ಸರ್ಕಾರದ ಗೋಮಾಳ ಜಮೀನಿನಲ್ಲಿ ಪ್ರತಿಮೆ ನಿರ್ಮಾಣದ ಬಗ್ಗೆ ಸರ್ಕಾರ ತನಿಖೆಗೆ ಆದೇಶಿಸಿದೆ. ವರದಿಯಲ್ಲಿ ಏನು ಬರುತ್ತೋ, ಅದನ್ನು ಆಧರಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಅದರಲ್ಲಿ ತಪ್ಪೇನಿದೆ ಎಂದು ಹೇಳಿದರು.
ಇನ್ನು ಕಪಾಲ ಬೆಟ್ಟ ಮುನೇಶ್ವರದ್ದು. ಬಕಾಲಿ ಭೈರವನಿಗೆ ಸೇರಿದ್ದು ಎಂಬ ಮಾತು ಕೇಳಿಬರುತ್ತಿವೆ. ಈ ವಿಷಯದಲ್ಲಿ ರಾಜಕಾರಣ ಬೆರೆಸಲು ತನಗೆ ಇಷ್ಟವಿಲ್ಲ. ಅದನ್ನು ಸ್ಥಳೀಯರ ನಿರ್ಧಾರಕ್ಕೇ ಬಿಡುತ್ತೇನೆಂದರು. ಕರ್ನಾಟಕದಲ್ಲಿ ಭಾಷಾವಾರು ಪ್ರಾಂತ್ಯ ರಚನೆ ಮಾಡುವ ವೇಳೆ ಅಧಿಕಾರದಲ್ಲಿದ್ದದ್ದು ಕಾಂಗ್ರೆಸ್. ಗಡಿ ವಿವಾದದ ಸೃಷ್ಟಿಕರ್ತರೂ ಅವರೇ ಆಗಿದ್ದಾರೆ ಎಂದು ಕಿಡಿಕಾರಿದರು.
ಕಾರ್ಖಾನೆ ಆರಂಭಕ್ಕೆ ಬದ್ಧ
ಮಂಡ್ಯ: ಮೈಷುಗರ್ ಹಾಗೂ ಪಿಎಸ್ಎಸ್ಕೆ ಕಾರ್ಖಾನೆ ಆರಂಭಿಸಲು ರಾಜ್ಯ ಸರ್ಕಾರ ಬದ್ಧವಾ ಗಿದ್ದು, ಜನವರಿ ಅಂತ್ಯದೊಳಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದೆಂದು ಸಕ್ಕರೆ ಸಚಿವ ಸಿ.ಟಿ.ರವಿ ತಿಳಿಸಿದರು. ಮೈಸೂರು ಸಕ್ಕರೆ ಕಾರ್ಖಾನೆಗೆ ಭೇಟಿ ನೀಡಿ ರೈತ ಮುಖಂಡರು, ಅಧಿಕಾರಿಗಳು ಹಾಗೂ ನೌಕರರೊಂದಿಗೆ ಸಭೆ ನಡೆಸಿ ಮಾತನಾಡಿದರು.
ಎರಡೂ ಕಾರ್ಖಾನೆಗಳನ್ನು ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ನಡೆಸಬೇಕೋ, ಗುತ್ತಿಗೆ ಪದ್ಧತಿಯಲ್ಲಿ ಆರಂಭಿಸಬೇಕೋ ಅಥವಾ ಸರ್ಕಾರಿ ಸ್ವಾಮ್ಯದಲ್ಲೇ ಉಳಿಸಿಕೊಂಡು ಪುನಶ್ಚೇತನಗೊಳಿಸಬೇಕೋ ಎಂಬ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನಿ ಸಲಾಗುವು ದೆಂದರು. ಮುಂದಿನ ಜೂನ್ ವೇಳೆಗೆ ಎರಡೂ ಕಾರ್ಖಾನೆಗಳು ಕಬ್ಬು ಅರೆಯುವಂತೆ ಸಜ್ಜುಗೊಳಿಸಲಾಗುವುದು.
ಈ ವರ್ಷ 34 ಲಕ್ಷ ಟನ್ ಕಬ್ಬು ಉತ್ಪಾದನೆಯಾ ಗಿದ್ದು, ಮುಂದಿನ ವರ್ಷ ಇದು 60 ಲಕ್ಷ ಟನ್ ತಲುಪುವ ಸಾಧ್ಯತೆಯಿದೆ. ಈ ವೇಳೆ ಕಾರ್ಖಾನೆ ಆರಂಭಿಸದಿದ್ದರೆ ರೈತರ ಸ್ಥಿತಿ ಮತ್ತಷ್ಟು ಶೋಚನೀಯವಾಗಲಿದೆ. ಹೀಗಾಗಿ ಕಬ್ಬು ಅರೆಯು ವಿಕೆಗೆ ಮೊದಲ ಆದ್ಯತೆ ನೀಡುವುದಾಗಿ ತಿಳಿಸಿದರು.