ಸರಕಾರಕ್ಕೆ ಬಿಸಿತುಪ್ಪವಾದ PSI ಪರೀಕ್ಷೆ ಹಗರಣ: ಖರ್ಗೆ ಆಡಿಯೋ ಟೇಪ್ ತನಿಖೆಗೆ ಸಿಎಂ ನಿರ್ಧಾರ
Team Udayavani, Apr 23, 2022, 10:44 AM IST
ಬೆಂಗಳೂರು: ಪಿಎಸ್ ಐ ನೇಮಕಾತಿ ಪರೀಕ್ಷೆ ಹಗರಣ ರಾಜ್ಯ ಬಿಜೆಪಿ ಸರಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದು ಮಾಜಿ ಸಚಿವ ಪ್ರಿಯಾಂಕ ಖರ್ಗೆ ಬಿಡುಗಡೆ ಮಾಡಿರುವ ಹೊಸ ಆಡಿಯೋ ಟೇಪ್ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಎಲ್ಲವೂ ತನಿಖೆ ಆಗುತ್ತದೆ. ನಾನು ಆ ಆಡಿಯೋ ನೋಡಿಲ್ಲ.ಆಡಿಯೋ ಇಬ್ಬರ ಮದ್ಯೆ ಮಾತುಕತೆ ಆಗಿದೆ. ಆ ಇಬ್ಬರು ಯಾರು? ಅವರ ಅರ್ಹತೆ, ಕ್ರೆಡಿಬಿಲಿಟಿ ಏನು? ಎಲ್ಲವೂ ತನಿಖೆ ಆಗುತ್ತದೆ. ಆಡಿಯೋ ಕೂಡ ತನಿಖೆಗೆ ಒಳಪಡಿಸುತ್ತೇವೆ. ಯಾರೇ ತಪ್ಪಿತಸ್ಥರು ಇದ್ದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಸಿಜೆ ಹಾಗೂ ಸಿಎಂ ಕಾನ್ಫರೆನ್ಸ್ ಇದೆ. ಹೀಗಾಗಿ ದೆಹಲಿಗೆ ಹೋಗುತ್ತೇನೆ. ಶಾಲೆಗಳಿಗೆ ಹುಸಿ ಬಾಂಬ್ ಕರೆ ಬಂದಿರುವ ಪ್ರಕರಣ ನನಗೆ ಗೊತ್ತಿಲ್ಲ, ನಾನು ಕಮಿಷನರ್ ಜೊತೆಗೆ ಮಾತನಾಡುತ್ತೇನೆ. ಶಾಂತಿ ಕದಡಲು ಆಗಾಗ ಇಂಥ ಪ್ರಯತ್ನ ಆಗುತ್ತಿದೆ. ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ತನಿಖೆ ಮಾಡುತ್ತೇವೆ, ಇಮೇಲ್ ಟ್ರ್ಯಾಕ್ ಮಾಡಿ ತನಿಖೆ ಮಾಡುತ್ತೇವೆ ಎಂದರು.