ರಕ್ಷಣಾ ಸಚಿವರ “ನಮಸ್ತೆ’ ಪಾಠಕ್ಕೆ ಚೀನಾ ಖುಷ್
Team Udayavani, Oct 10, 2017, 6:35 AM IST
ಬೀಜಿಂಗ್: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸಿಕ್ಕಿಂ ಗಡಿ ಪ್ರದೇಶದಲ್ಲಿರುವ ನಾಥುಲಾ ಪಾಸ್ನಲ್ಲಿ ತನ್ನ ಸೈನಿಕರಿಗೆ “ನಮಸ್ತೆ’ ಮಾಡಲು ಕಲಿಸಿದ್ದರಿಂದ ಉತ್ಸುಕಗೊಂಡಿದೆ ಚೀನಾ. ಅದಕ್ಕೆ ಪೂರಕವಾಗಿ ಸ್ಪಂದಿಸಿರುವ ಚೀನಾ, ಭಾರತದ ಜತೆ ಹೊಂದಿರುವ ಗಡಿ ಪ್ರದೇಶದಲ್ಲಿ ಶಾಂತಿ ಕಾಯ್ದುಕೊಳ್ಳಲು ಮುಂದಾಗಿದೆ.
ಸಚಿವೆ ನಿರ್ಮಲಾ ಅವರ ನಡೆಯು ಸದ್ಭಾವನೆಯಿಂದ ಕೂಡಿದ್ದು, 1890ರ ಐತಿಹಾಸಿಕ ಯು.ಕೆ-ಚೀನಾ ಒಪ್ಪಂದಕ್ಕೆ ಶುಭ ಕೋರಿದಂತಾಗಿದೆ ಎಂದು ಆ ದೇಶದ ವಿದೇಶಾಂಗ ಇಲಾಖೆ ವಕ್ತಾರ ಪ್ರತಿಪಾದಿಸಿದ್ದಾರೆ. ಗಡಿ ಪ್ರದೇಶದಲ್ಲಿ ಭಾರತದ ಜತೆ ಶಾಂತಿ ಮತ್ತು ನೆಮ್ಮದಿ ಕಾಯ್ದುಕೊಂಡು ಬರಲು ಚೀನಾ ಉತ್ಸುಕವಾಗಿದೆ ಎಂದು ಹೇಳಿದ್ದಾರೆ.
ಐತಿಹಾಸಿಕ ಒಪ್ಪಂದ ಮತ್ತು ಇತ್ತೀಚಿನ ದಿನಗಳಲ್ಲಿ ಚೀನಾದ ಜತೆ ಮಾಡಿಕೊಂಡಿರುವ ಒಪ್ಪಂದಗಳ ಆಧಾರದ ಮೇಲೆ ಎರಡೂ ದೇಶಗಳ ನಡುವಿನ ಗಡಿ ಪ್ರದೇಶದಲ್ಲಿ ಉತ್ತಮ ಬಾಂಧವ್ಯ ಕಾಯ್ದುಕೊಂಡು ಬರಬಹುದಾಗಿದೆ ಎಂದು ಹೇಳಿದ್ದಾರೆ. ತಮ್ಮ ದೇಶದ ಸೈನಿಕರಿಗೆ “ನಮಸ್ತೆ’ ಎಂದು ಗೌರವ ಸೂಚಿಸಲು ಕಲಿಸಿದ್ದು ನಿಜಕ್ಕೂ ಉತ್ತಮ ಬೆಳವಣಿಗೆ ಎಂದು ಅವರು ಕೊಂಡಾಡಿದ್ದಾರೆ. ಸರ್ಕಾರಿ ಸ್ವಾಮ್ಯದ ಆಂಗ್ಲ ಸುದ್ದಿವಾಹಿನಿ ಸಿಜಿಟಿಎನ್ ರಕ್ಷಣಾ ಸಚಿವರ ದೃಶ್ಯಾವಳಿಗಳನ್ನು ಪ್ರಸಾರ ಮಾಡಿತ್ತು. ಜತೆಗೆ ಹಾಂಕಾಂಗ್ನಲ್ಲಿರುವ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ “ಭಾರತದ ರಕ್ಷಣಾ ಸಚಿವರಿಂದ ಚೀನಾ ಗಡಿಯಲ್ಲಿ ಸೈನಿಕರಿಗೆ ಗೌರವ’ ಎಂಬ ಶಿರೋನಾಮೆಯಲ್ಲಿ ವರದಿ ಪ್ರಕಟಿಸಿತ್ತು.