ಭಾರತಕ್ಕೆ ಗೂಢಚರ್ಯೆ ಮಾಡಲು ಬಂದಿದ್ದೆ! ಸತ್ಯಾಂಶ ಬಾಯಿಬಿಟ್ಟ ಪಾಕಿಸ್ತಾನ ಪತ್ರಕರ್ತ
ಯುಪಿಎ ಸರ್ಕಾರದ ಅವಧಿಯಲ್ಲಿ ಭಾರತಕ್ಕೆ ಬಂದಿದ್ದ ನುಸ್ರುತ್
Team Udayavani, Jul 13, 2022, 7:10 AM IST
ಇಸ್ಲಾಮಾಬಾದ್: ಭಾರತದಲ್ಲಿ ನಡೆಯುವ ಅಂತಾರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸುವ ಕೆಲವು ಪಾಕಿಸ್ತಾನದ ಪ್ರತಿನಿಧಿಗಳು ಗೂಢಚರ್ಯೆಯ ಉದ್ದೇಶಕ್ಕಾಗಿಯೇ ಆಗಮಿಸಿರುತ್ತಾರೆ ಎಂಬ ಅನುಮಾನಗಳಿಗೆ ಪುಷ್ಠಿ ನೀಡುವಂಥ ಬೆಳವಣಿಗೆಯೊಂದು ಪಾಕಿಸ್ತಾನದಲ್ಲಿ ನಡೆದಿದೆ.
ಪಾಕಿಸ್ತಾನದ ವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಅಲ್ಲಿನ ಹಿರಿಯ ಪತ್ರಕರ್ತ ನುಸ್ರತ್ ಮಿರ್ಜಾ ಅವರು, ತಾವು ಭಾರತದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ 2002ರಿಂದ 2011ರ ಅವಧಿಯಲ್ಲಿ ಐದು ಬಾರಿ ಭಾರತಕ್ಕೆ ಹೋಗಿದ್ದು, ಭಾರತಕ್ಕೆ ಸಂಬಂಧಿಸಿದ ಹಲವಾರು ವಿಚಾರಗಳನ್ನು ಕಲೆ ಹಾಕಿ ಪಾಕಿಸ್ತಾನದ ಐಎಸ್ಐಗೆ ಒಪ್ಪಿಸಿದ್ದಾಗಿ ತಿಳಿಸಿದ್ದಾರೆ.
“ಭಾರತಕ್ಕೆ ತೆರಳಲು ವೀಸಾಕ್ಕಾಗಿ ಅರ್ಜಿ ಹಾಕುವ ಪಾಕಿಸ್ತಾನೀಯರಿಗೆ ಭಾರತದ 3 ಪ್ರಾಂತ್ಯಗಳಿಗೆ ಮಾತ್ರ ಭೇಟಿ ನೀಡಲು ಮಾತ್ರ ವೀಸಾ ಕೊಡಲಾಗುತ್ತದೆ. ಆದರೆ ನನಗೆ ಏಳು ಪ್ರಾಂತ್ಯಗಳಿಗೆ ಭೇಟಿ ನೀಡಲು ಭಾರತ ಸರ್ಕಾರವೇ ಅವಕಾಶ ಕಲ್ಪಿಸಿತ್ತು. ಆಗ ಪಾಕಿಸ್ತಾನದ ವಿದೇಶಾಂಗ ಸಚಿವರಾಗಿದ್ದ ಖುರ್ಷಿದ್ ಕೌಸರಿ, ಭಾರತ ಸರ್ಕಾರದೊಂದಿಗೆ ಚರ್ಚಿಸಿ ನನಗೆ ಭಾರತದ ಏಳು ನಗರಗಳಿಗೆ ಭೇಟಿ ನೀಡಲು ಅವಕಾಶ ಮಾಡಿಕೊಟ್ಟಿದ್ದರು’ ಎಂದಿದ್ದಾರೆ.
ಭಾರತದ ವೀಕ್ನೆಸ್ ಗೊತ್ತು:
“”ಬೆಂಗಳೂರು, ಪಾಟ್ನಾ, ಕೋಲ್ಕತಾ, ದೆಹಲಿ ಮತ್ತು ಚೆನ್ನೈಗೆ ತೆರಳಿದ್ದೇನೆ. ಭಾರತೀಯರ ವೀಕ್ನೆಸ್ ಚೆನ್ನಾಗಿ ಗೊತ್ತು. ಅಲ್ಲಿನ ಮುಸ್ಲಿಂ ಸಮುದಾಯದ ಮನಸ್ಥಿತಿ ಮತ್ತು ಸರ್ಕಾರ ಹೇಗೆ ಕೆಲಸ ಮಾಡುತ್ತದೆ ಎನ್ನುವುದೂ ನನಗೆ ಗೊತ್ತು. ಆ ಎಲ್ಲಾ ಮಾಹಿತಿಗಳನ್ನು ನಾನು ಪಾಕಿಸ್ತಾನಕ್ಕೆ ಕೊಟ್ಟಿದ್ದೆ” ಎಂದು ನುಸ್ರುತ್ ಬಾಯಿಬಿಟ್ಟಿದ್ದಾರೆ.
“ಮಾದಕ’ ದೆವ್ವದ ಸಂಚಾರ
ಮೊದಲೇ ಆರ್ಥಿಕ ದುಸ್ಥಿತಿಯಿಂದ ಬಳಲುತ್ತಿರುವ ಪಾಕಿಸ್ತಾನದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿ ಜನಜೀವನ ದುಸ್ತರವಾಗಿದೆ. ಇದರ ಜತೆಯಲ್ಲೇ ಅಲ್ಲಿನ ಮಾದಕ ವಸ್ತುಗಳ ಸೇವನೆಗೆ ಬಲಿಯಾಗುತ್ತಿರುವ ಯುವಜನರ ಸಂಖ್ಯೆ ಹೆಚ್ಚಾಗ ತೊಡಗಿದ್ದು, ಅದೊಂದು ಸಾಮಾಜಿಕ ಪೀಡೆಯಾಗಿ ಪರಿವರ್ತನೆಯಾಗಿದೆ.
ಮಾದಕ ವಸ್ತುಗಳ ತವರೂರು ಎನಿಸಿರುವ ಕರಾಚಿಯಲ್ಲಿ ಡ್ರಗ್ಸ್ ಕೊಳ್ಳುವುದೆಂದರೆ ನಾವು ಇಲ್ಲಿ ಒಂದು ನೀರಿನ ಬಾಟಲ್ ಕೊಳ್ಳುವಷ್ಟೇ ಸಲೀಸಾಗಿ ಬಿಟ್ಟಿದೆ. ಕಳೆದ ಕೆಲವು ತಿಂಗಳಲ್ಲಿ ಕರಾಚಿ ಪ್ರಾಂತ್ಯವಾದ ರೆಹ್ರಿಗೋತ್ನಲ್ಲಿ 150ಕ್ಕೂ ಅಧಿಕ ಮಂದಿ ಮಾದಕ ವಸ್ತುಗಳನ್ನು ಸೇವಿಸಿಯೇ ಮೃತಪಟ್ಟಿದ್ದಾರೆ. ಈ ಪ್ರಾಂತ್ಯದಲ್ಲಿ ಅಪ್ರಾಪ್ತ ವಯಸ್ಕರು, ಮಹಿಳೆಯರು ಮಾದಕವಸ್ತುಗಳನ್ನು ತೆಗೆದುಕೊಂಡು ಬಿದ್ದುಕೊಂಡಿರುವುದು ದೃಶ್ಯ ಎಂದು ಮೂಲಗಳು ತಿಳಿಸಿವೆ.