ಬಡತನದಿಂದ ಕಂಗೆಟ್ಟ ಜನತೆ: ಟುನೇಶಿಯಾ : ಹಸಿವು ತಾಳಲಾರದೆ ಪ್ರತಿಭಟನೆ
We need food': Tunisians struggle under Covid 19 lockdown
Team Udayavani, Apr 13, 2020, 6:23 PM IST
ಟುನೇಶಿಯಾ: ಕೋವಿಡ್ 19 ಸಮಸ್ಯೆ ದಿನೇದಿನೆ ಉಲ್ಬಣವಾಗುತ್ತಿದ್ದು, ಟುನೇಶಿಯಾದ ಜನರು ಕಡಿಮೆ ಆದಾಯ, ಬಡತನದಿಂದ ಕಂಗೆಟ್ಟಿದ್ದಾರೆ.
ಅಲ್ಲಿನ ಜನರದ್ದು ಈಗ ಆಹಾರಕ್ಕಾಗಿಯೇ ಹೋರಾಡುವ ಸ್ಥಿತಿ. ವಿಶ್ವಬ್ಯಾಂಕ್ ಅಂಕಿ ಅಂಶಗಳ ಪ್ರಕಾರ 2010 ರಿಂದ ಇಲ್ಲಿನ ಆರ್ಥಿಕ ಬೆಳವಣಿಗೆಯು ವರ್ಷಕ್ಕೆ 1.8 ಪ್ರತಿಶತದಷ್ಟಿದೆ. ಇದು ಹಿಂದಿನ ವಾರ್ಷಿಕ ಸರಾಸರಿಗಿಂತ ಕಡಿಮೆ. 2007 ಬೆನ್ ಅಲಿ ನೇತೃತ್ವದಲ್ಲಿ ನಿರುದ್ಯೋಗವು ಶೇ. 12 ರಷ್ಟು ತಲುಪಿತ್ತು. 2011 ರ ದಂಗೆಯ ಸಮಯದಲ್ಲಿ ಅದು 18 ಪ್ರತಿಶತಕ್ಕೆ ಏರಿತು. ಈ ವರ್ಷ 15 ಕ್ಕೆ ಕುಸಿದಿದೆ.
ಕೋವಿಡ್19 ವೈರಸ್ ಹರಡುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಎರಡು ವಾರ ರಾಷ್ಟ್ರವ್ಯಾಪಿ ಲಾಕ್ಡೌನ್ ವಿಧಿಸಲು ಸರ್ಕಾರ ಕೈಗೊಂಡ ನಿರ್ಧಾರ ಜನರನ್ನು ಸಂಕಷ್ಟಕ್ಕೀಡು ಮಾಡಿದೆ. ಈಗ ಲಾಕ್ಡೌನ್ ನ್ನು ಎಪ್ರಿಲ್ 19 ರ ವರೆಗೆ ವಿಸ್ತರಿಸಲಾಗಿದೆ.
ರೆಸ್ಟೊರೆಂಟ್, ಹೊಟೇಲು, ಕಚೇರಿಗಳು, ವಿಮಾನಗಳ ನಿಷೇಧ ಮತ್ತು ಭೂ ಗಡಿಗಳನ್ನು ಮುಚ್ಚುವುದು-ಇತ್ಯಾದಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇವೆಲ್ಲವೂ ಈಗಾಗಲೇ ಹೆಣಗಾಡುತ್ತಿರುವ ಆರ್ಥಿಕ ಪರಿಸ್ಥಿಯನ್ನು ಸ್ಥಗಿತಗೊಳಿಸಿದೆ. ಟುನೇಶಿಯಾದ ಆರ್ಥಿಕತೆಯು 2020 ರಲ್ಲಿ ಶೇ.4.3 ರಷ್ಟು ಕುಗ್ಗಲಿದೆ ಎಂದು ಅಂತಾರಾಷ್ಟ್ರಿಯ ಹಣಕಾಸು ನಿಧಿ ಶುಕ್ರವಾರ ತಿಳಿಸಿದೆ.
ಆರ್ಥಿಕ ನೆರವು
ಅರ್ಥಿಕತೆ ಸ್ಥಗಿತದ ದುಷ್ಪರಿಣಾಮ ತಗ್ಗಿಸಲು ಹಾಗೂ ಸಾಮಾಜಿಕ ಅಶಾಂತಿಯನ್ನು ನಿವಾರಿಸುವ ಪ್ರಯತ್ನದಲ್ಲಿ ಪ್ರಧಾನ ಮಂತ್ರಿ ಎಲೀಸ್ ಫಖ್ಫಾಕ್ 2.5 ಬಿಲಿಯನ್ ದಿನಾರ್ ಹಂಚಿಕೆ ಮಾಡುವುದಾಗಿ ಘೋಷಿಸಿದರು. ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯವಹಾರಗಳ ಮೇಲಿನ ತೆರಿಗೆ ವಸೂಲಿ ಮುಂದೂಡಿಕೆ ಹಾಗೂ ಕಡಿಮೆ ಆದಾಯದ ಮರುಪಾವತಿಯನ್ನು ವಿಳಂಬಿಸುವುದರ ಜತೆಗೆ ಬಡಕುಟುಂಬಗಳಿಗೆ ಸಹಾಯ ಮಾಡಲು 450 ಮಿಲಿಯನ್ ದಿನಾರ್ಗಳನ್ನು ಈ ಪ್ಯಾಕೆಜ್ ಒಳಗೊಂಡಿದೆ. ಆದರೆ ಟುನೇಶಿಯಾದಲ್ಲಿ ಕೂಲಿ ಕಾರ್ಮಿಕರ ಸಂಖ್ಯೆ ಹೆಚ್ಚಾಗಿದೆ. ಅವರ ಜೀವನೊಪಾಯಕ್ಕೆ ತೀರಾ ಹೊಡೆತ ಬಿದ್ದಿದೆ.
ಪ್ರತಿಭಟಿಸುವಂತೆ ಮಾಡಿತು
ಸರಕಾರದ ಕಾನೂನು ಕ್ರಮವನ್ನು ವಿರೋಧಿಸಿ ದೇಶದ ವಿವಿಧ ಭಾಗಗಳಲ್ಲಿ ನೂರಾರು ಜನ ತಮ್ಮ ಸ್ಥಳೀಯ ಸರಕಾರಿ ಕಚೇರಿಗಳ ಎದುರು ಪ್ರತಿಭಟನೆ ಆರಂಭಿಸಿದರು. ಮೂಲ ಆದಾಯವನ್ನು ಕಳೆದುಕೊಂಡ ಜನರು ಸ್ವಯಂ ಪ್ರೇರಿತರಾಗಿ ಹೊರಬಂದು ತಮ್ಮ ಹಸಿವನ್ನು ನೀಗಿಸುವಂತೆ ಪ್ರತಿಭಟಿಸಿದರು ಎಂದು ಅಲ್ಲಿನ ಕಾರ್ಮಿಕ ವರ್ಗದ ಮಾರ್ವನ್ ಜೆಲ್ಲಾಸಿ ಅಂತಾರಾಷ್ಟ್ರೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ.