ಇಮ್ರಾನ್ ಹಣಿಯಲು ರಣತಂತ್ರ: ಕಾನೂನಿಗೆ ರಾತ್ರೋರಾತ್ರಿ ತಿದ್ದುಪಡಿ
Team Udayavani, Jul 5, 2023, 7:50 AM IST
ಇಸ್ಲಾಮಾಬಾದ್: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಹಣಿಯಲು ಪಾಕ್ ಸರ್ಕಾರ ದಿನಕ್ಕೊಂದು ತಂತ್ರ ರೂಪಿಸುತ್ತಿದ್ದು, ಸೋಮವಾರ ರಾತ್ರೋರಾತ್ರಿ ಸದ್ದಿಲ್ಲದೇ, ಭ್ರಷ್ಟಾಚಾರ ನಿಗ್ರಹ ಕಾನೂನಿಗೆ ತಿದ್ದುಪಡಿ ತಂದೆ. ಭ್ರಷ್ಟಾಚಾರ ಪ್ರಕರಣದಲ್ಲಿ ಇಮ್ರಾನ್ ತನಿಖಾಧಿಕಾರಿಗಳ ಮುಂದೆ ಹಾಜರಾಗಲು ಕೆಲವೇ ಗಂಟೆಗಳಿರುವಾಗ ಈ ಬೆಳವಣಿಗೆ ನಡೆದಿರುವುದು ಮಹತ್ವ ಪಡೆದುಕೊಂಡಿದೆ.
ನೂತನ ತಿದ್ದುಪಡಿಯು ಭ್ರಷ್ಟಾಚಾರ ಪ್ರಕರಣದ ತನಿಖೆ ಅವಧಿಯಲ್ಲೇ ಆರೋಪಿಯನ್ನು ಬಂಧಿಸಲು ನ್ಯಾಷನಲ್ ಅಕೌಂಟೆಬಿಲಿಟಿ ಬ್ಯೂರೋ(ಎನ್ಎಬಿ)ಗೆ ಅಧಿಕಾರ ನೀಡುತ್ತದೆ. ಅಲ್ಲದೇ, 15 ದಿನಗಳ ಬದಲಿಗೆ 30 ದಿನಗಳ ಕಾಲ ಆರೋಪಿಯನ್ನು ವಶದಲ್ಲಿಟ್ಟುಕೊಳ್ಳಲು ಅವಕಾಶ ನೀಡಲಿದೆ.
ಈ ಪ್ರಸ್ತಾಪಕ್ಕೆ ಅಧ್ಯಕ್ಷ ಆರಿಫ್ ಮೌಲ್ವಿ ಅವರ ಅನುಪಸ್ಥಿಯಲ್ಲಿ ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಸೆನೆಟ್ ಅಧ್ಯಕ್ಷ ಸಾದಿಕ್ ಸಂಜ್ರಾನಿ ಅನುಮೋದನೆ ನೀಡಿ, ಸುಗ್ರೀವಾಜ್ಞೆ ಹೊರಡಿಸಿದ್ದಾರೆ. ಮಾಧ್ಯಮಗಳು ಇದನ್ನು ಖಾನ್ ಅವರನ್ನು ಸಿಲುಕಿಸುವ ಸರ್ಕಾರದ ಮತ್ತೂಂದು ಪ್ರಯತ್ನಗಳೆಂದೇ ಬಣ್ಣಿಸಿವೆ.