ಮೊದಲ ಹಿಂದೂ ದೇಗುಲಕ್ಕೆ ಅಡಿಪಾಯ
Team Udayavani, Apr 21, 2019, 6:00 AM IST
ದುಬಾೖ: ಅಬುಧಾಬಿಯಲ್ಲಿ ನಿರ್ಮಾಣವಾಗಲಿರುವ ಮೊಟ್ಟ ಮೊದಲ ಹಿಂದೂ ದೇಗುಲಕ್ಕೆ ಶನಿವಾರ ಶಿಲಾನ್ಯಾಸ ನೆರವೇರಿ ಸಲಾಯಿತು. ಸುಮಾರು 4 ಗಂಟೆಗಳ ಕಾಲ ಜರಗಿದ ಈ ಸಮಾರಂಭದಲ್ಲಿ, ದೇಗುಲದ ನಿರ್ಮಿಸುತ್ತಿರುವ ಬೋಚಸನ್ವಾಸಿ ಶ್ರೀ ಅಕ್ಷರ್-ಪುರುಶೋತ್ತಮ್ ಸ್ವಾಮಿ ನಾರಾಯಣ್ ಸಂಸ್ಥೆಯ (ಬಿಎಪಿಎಸ್) ಸ್ವಾಮೀಜಿ ಮಹಾಂತ್ ಸ್ವಾಮಿ ಮಹಾರಾಜ್, ಸ್ಥಳೀಯ ಕಾಲಮಾನ ಬೆಳಗ್ಗೆ 11.45ಕ್ಕೆ ಶಿಲಾ ನ್ಯಾಸ ನೆರವೇರಿಸಿದರು. ಐತಿಹಾಸಿಕ ಎನಿಸಿದ ಈ ಭವ್ಯ ಸಮಾರಂಭದಲ್ಲಿ ಯುಎಇಯಲ್ಲಿರುವ ಸುಮಾರು 2,500 ಭಾರತೀಯರು, ಭಾರತ ಮತ್ತು ಯುಎಇಯ ರಾಜತಾಂತ್ರಿಕ ಅಧಿಕಾರಿಗಳು ಭಾಗವಹಿಸಿದ್ದರು. ದುಬಾೖನ ಅಬು ಮುರೇಖ್ ಪ್ರಾಂತ್ಯದಲ್ಲಿ ನಿರ್ಮಾಣ ವಾಗುತ್ತಿರುವ ಈ ದೇವಸ್ಥಾನ, ದಿಲ್ಲಿಯಲ್ಲಿರುವ ಅಕ್ಷರ ಧಾಮ ದೇಗುಲದ ಪ್ರತಿರೂಪವಾಗಿರುತ್ತದೆ.
ಪ್ರಧಾನಿಯಿಂದ ಶುಭ ಸಂದೇಶ: ಪ್ರಧಾನಿ ನರೇಂದ್ರ ಮೋದಿಯವರು ಸಮಾರಂಭಕ್ಕೆ ಶುಭ ಸಂದೇಶ ಕಳುಹಿಸಿದ್ದು, ಅದನ್ನು ಯುಎಇ ಯಲ್ಲಿರುವ ಭಾರತದ ರಾಯಭಾರಿ ನವ ದೀಪ್ ಸೂರಿ, ಸಮಾರಂಭದಲ್ಲಿ ಓದಿ ಹೇಳಿ ದರು. ಭಾರತದ 130 ಕೋಟಿ ಜನರ ಪರವಾಗಿ, ಯುಎಇ ರಾಜಕುಮಾರ ಶೇಖ್ ಮೊಹಮ್ಮದ್ ಬಿನ್ ಝಯೇದ್ ಅಲ್ ನಹ್ಯಾನ್ ಅವರಿಗೆ ಮೋದಿಯವರು ಧನ್ಯವಾದ ಅರ್ಪಿಸಿದ್ದಾರೆ. ಈ ದೇಗುಲ “ವಸುಧೈವ ಕುಟುಂಬಕಂ’ ಎಂಬ ವೇದವಾಕ್ಯದ ಪ್ರತೀಕವಾಗಿರಲಿದೆ ಎಂದು ಮೋದಿ ಆಶಿಸಿರುವುದಾಗಿ ಸೂರಿ ಸಭಿಕರಿಗೆ ತಿಳಿಸಿದರು.