ದೀಪಾವಳಿಯಲ್ಲಿ ಆಯೆ ಏರ್?
Team Udayavani, Aug 9, 2018, 2:43 PM IST
ದೇವದಾಸ್ ಕಾಪಿಕಾಡ್ ಅವರ ತಂಡದ ‘ಏರಾ ಉಲ್ಲೆರ್ಗೆ’ ಸಿನೆಮಾ ಇತ್ತೀಚೆಗೆ ಶೂಟಿಂಗ್ ಪೂರ್ಣಗೊಳಿಸಿ ಈಗ ಸೆನ್ಸಾರ್ ಹಾದಿಯಲ್ಲಿದೆ. ಆದರೆ, ಇದೇ ಟೈಟಲ್ಗೆ ಹತ್ತಿರವೇ ಇರುವಂತಹ ‘ಆಯೆ ಏರ್’ ಸಿನೆಮಾ ಈಗಾಗಲೇ ಕೋಸ್ಟಲ್ವುಡ್ನಲ್ಲಿ ಸಿದ್ಧಗೊಂಡಿದೆ. ಯಾವುದೇ ಸದ್ದುಗದ್ದಲವಿಲ್ಲದೆ ಈ ಸಿನೆಮಾ ಮೂಡಿಬರುತ್ತಿರುವುದು ವಿಶೇಷ.
ಶಿವ ಫಿಲಂಸ್ ಲಾಂಛನದಲ್ಲಿ ಶಿವಕುಮಾರ್ ನಿರ್ಮಾಣ ಹಾಗೂ ಮಂಜುನಾಥ ನಿರ್ದೇಶನದಲ್ಲಿ ‘ಆಯೆ ಏರ್’ ಸಿನೆಮಾ ರೆಡಿಯಾಗಿದೆ. ಕಾರ್ಕಳ ಸುತ್ತಮುತ್ತ ಸಿನೆಮಾದ ಶೂಟಿಂಗ್ 36 ದಿನ ನಡೆದಿತ್ತು. ಮಾಂಟ್ರಾಡಿ, ಹೊಸ್ಮಾರು, ಬೆಳುವಾಯಿ, ದರೆಗುಡ್ಡೆ ಮೊದಲಾದ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸಿನೆಮಾ ಶೂಟಿಂಗ್ ಬಗ್ಗೆ ಒಂದಿನಿತೂ ಗುಟ್ಟುಬಿಡದ ಚಿತ್ರತಂಡ ಶೂಟಿಂಗ್ ಮುಗಿಸಿರುವುದು ವಿಶೇಷ. ಅಂದಹಾಗೆ, ಚಿತ್ರಕ್ಕೆ ವಾಸು ಮತ್ತು ಶಶಿಧರ್ ಅವರ ಛಾಯಾಗ್ರಹಣವಿದೆ. ಶಶಿಧರ್ ಸಂಗೀತ ನೀಡಿದ್ದಾರೆ. ಖ್ಯಾತ ನಾಟಕಕಾರ ತುಳಸೀದಾಸ ಮಂಜೇಶ್ವರ ಸಂಭಾಷಣೆ ಒದಗಿಸಿದ್ದಾರೆ. ಶ್ರೀಕಾಂತ್ ಶೆಟ್ಟಿ, ಸಂಭ್ರಮ, ಅರವಿಂದ ಬೋಳಾರ್, ರಂಜನ್ ಬೋಳೂರು, ಪ್ರವೀಣ್ ಮರ್ಕಮೆ, ಗಾಳಿಪಟ ಹರೀಶ್, ಮೋನಿಕಾ ಮುಂತಾದವರು ಈ ಸಿನೆಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಸದ್ಯ ಈ ಸಿನೆಮಾ ಡಬ್ಬಿಂಗ್ ಹಂತದಲ್ಲಿದೆ. ಹೆಚ್ಚಾ ಕಡಿಮೆ ದೀಪಾವಳಿ ವೇಳೆಗೆ ಈ ಸಿನೆಮಾ ತೆರೆಕಾಣುವ ಸಾಧ್ಯತೆ ಇದೆ.