ತುಳುನಾಡಿನ ಐತಿಹಾಸಿಕ ಕಥೆಗೆ ಕೋಸ್ಟಲ್ವುಡ್ನಲ್ಲಿ ಮರುಜೀವ !
Team Udayavani, Feb 14, 2019, 7:37 AM IST
ತುಳುನಾಡಿನಲ್ಲಿ ನಡೆದ ಐತಿಹಾಸಿಕ ಕಥೆಯಾಧಾರಿತವಾಗಿ ಅವಳಿ ವೀರ ಪುರುಷರಾದ ‘ಕೋಟಿ ಚೆನ್ನಯ’ರ ಕಾರಣಿಕ ಕಥೆಯು ನಾಟಕ, ಯಕ್ಷಗಾನದ ಮೂಲಕ ಪ್ರಸಿದ್ಧಿ ಪಡೆದಿರುವಂತೆಯೇ, ಎರಡು ಬಾರಿ ತುಳು ಸಿನೆಮಾ ಲೋಕದಲ್ಲೂ ಕಾಣಿಸಿಕೊಂಡು ಹೊಸ ಅಲೆಯನ್ನು ಸೃಷ್ಟಿಸಿತ್ತು. ತುಳುನಾಡಿನ ಐತಿಹಾಸಿಕ ಕಥೆಯಾಧಾರಿತವಾಗಿ ಮೂಡಿಬಂದ ಇಂತಹ ಹಲವು ಚಿತ್ರಗಳ ಬಳಿಕ ಈಗ ಮತ್ತೊಂದು ಕಥೆ ತೆರೆಗೆ ಬರಲು ಸಿದ್ಧವಾಗಿದೆ. ಕೋಟಿ ಚೆನ್ನಯರ ತಾಯಿ ‘ದೇಯಿ ಬೈದ್ಯೆತಿ’ಯ ಕಥೆಯ ಮೂಲಕ ತುಳು ಚಿತ್ರಲೋಕವೊಂದು ಕೋಸ್ಟಲ್ ವುಡ್ನಲ್ಲಿ ಹೊಸ ಮನ್ವಂತರ ಸೃಷ್ಟಿಸಲು ಸಜ್ಜಾಗಿದೆ.
1.15 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ‘ದೇಯಿ ಬೈದ್ಯೆತಿ’ ಐತಿಹಾಸಿಕ ತುಳು ಸಿನೆಮಾದಲ್ಲಿ 500 ವರ್ಷಗಳ ಹಿಂದಿನ ನೈಜ ಕಥಾನಕ ಪರದೆಯ ಮೇಲೆ ಪ್ರಕಟವಾಗಲಿದೆ. ಕನ್ನಡ ಹಾಗೂ ತುಳು ಎರಡೂ ಭಾಷೆಗಳಲ್ಲಿ ಈ ಚಿತ್ರವನ್ನು ತಯಾರಿಸಲಾಗಿದ್ದು, ಮೊದಲು ತುಳು ಸಿನೆಮಾ ರಿಲೀಸ್ ಆದ ಬಳಿಕ ಕನ್ನಡ ಸಿನೆಮಾ ರಿಲೀಸ್ ಮಾಡುವ ಸಿದ್ಧತೆ ನಡೆಯಲಿದೆ.
5ನೇ ಶತಮಾನದ ಅವಧಿಯಲ್ಲಿ ತುಳುನಾಡಿನಲ್ಲಿ ನಡೆದ ಐತಿಹಾಸಿಕ ಕಥೆಯಾದ, ಅವಳಿ ವೀರ ಪುರುಷರಾದ ಕೋಟಿ ಚೆನ್ನಯರ ಕಾರಣಿಕ ಕಥೆಯನ್ನು ವಿಶುಕುಮಾರರು ‘ಕೋಟಿ ಚೆನ್ನಯ’ ಎಂಬ ಹೆಸರಿನಲ್ಲಿ ತುಳು ನಾಟಕ ಬರೆದಿದ್ದರು. ಇದನ್ನು 1973ರಲ್ಲಿ ಕೆ.ಮುದ್ದು ಸುವರ್ಣ ಅವರು ಚಿತ್ರ ನಿರ್ಮಿಸಿದರು. ವಿಶು ಕುಮಾರ್ ಅವರೇ ಇದರ ನಿರ್ದೇಶನ ಮಾಡಿದ್ದರು. 4 ಹಾಡುಗಳಿದ್ದ ಈ ಚಿತ್ರಕ್ಕೆ ವಿಜಯ ಭಾಸ್ಕರ್ ಸಂಗೀತ ಒದಗಿಸಿದ್ದಾರೆ. ಎಕ್ಕ ಸಕ.. ಎಕ್ಕ ಸಕ.. ಎಕ್ಕ ಸಕ್ಕಲಾ… ಸೇರಿದಂತೆ ಎಲ್ಲಾ ಹಾಡುಗಳು ಇಂದಿಗೂ ಉತ್ತಮ ಹಾಡುಗಳ ಪಟ್ಟಿಯಲ್ಲಿವೆ. ಈ ಚಿತ್ರವು ತುಳುನಾಡ ಐತಿಹಾಸಿಕ ಕಥೆಯ ಪ್ರಥಮ ಚಿತ್ರ ಎಂಬ ಮಾನ್ಯತೆ ಪಡೆಯುವುದರ ಜತೆಗೆ, 1973-74ನೇ ವರ್ಷದ ರಾಜ್ಯದ ನಾಲ್ಕನೇ ಅತ್ಯುತ್ತಮ ಚಲನಚಿತ್ರ ಪುರಸ್ಕಾರವನ್ನೂ ಪಡೆದಿತ್ತು.
ಆ ಬಳಿಕ 2006ರಲ್ಲಿ ಆರ್. ಧನ್ ರಾಜ್ ನಿರ್ಮಾಣದಲ್ಲಿ ಆನಂದ್ ಪಿ.ರಾಜು ನಿರ್ದೇಶನದಲ್ಲಿ ‘ಕೋಟಿ ಚೆನ್ನಯ’ ಚಿತ್ರ ಮತ್ತೊಮ್ಮೆ ತೆರೆಮೇಲೆ ಮೂಡಿಬಂತು. ಯಕ್ಷಗಾನದ ಎರಡು ಹಾಡುಗಳು ಸಹಿತ ಒಟ್ಟು 6 ಹಾಡುಗಳಿರುವ ಈ ಚಿತ್ರಕ್ಕೆ ವಿ. ಮನೋಹರ್ ಸಂಗೀತ ನೀಡಿದ್ದರು. ಈ ಸಿನೆಮಾಕ್ಕೆ 2007ರ ರಾಷ್ಟ್ರೀಯ ಉತ್ತಮ ಪ್ರಾದೇಶಿಕ ಭಾಷಾ ಚಲನಚಿತ್ರ ಪ್ರಶಸ್ತಿ ಕೂಡ ಲಭ್ಯವಾಗಿತ್ತು.
ದಿನೇಶ್ ಇರಾ