ಭರವಸೆಯೆ ಬದುಕು ವಿಡಿಯೋ ಆಲ್ಬಂ
Team Udayavani, Jun 11, 2021, 4:02 PM IST
ಕೋವಿಡ್ ಸಂಕಷ್ಟದ ಸಮಯದಲ್ಲಿ ತತ್ತರಿಸಿ ಹೋಗಿರುವ ಜನಸಾಮಾನ್ಯರಿಗೆ ಹೊಸ ಹುಮ್ಮಸ್ಸು ಮತ್ತು ಭರವಸೆ ತುಂಬುವ ಸಲುವಾಗಿ ಇಲ್ಲೊಂದು ತಂಡ ವಿಶೇಷ ಹಾಡೊಂದನ್ನು ರೆಡಿ ಮಾಡಿದೆ. ಅಂದಹಾಗೆ, ಇಂಥದ್ದೊಂದು ವಿಭಿನ್ನ ಕಾರ್ಯಕ್ಕೆ ಮುಂದಾಗಿರುವುದು “ಫಾರ್ ರಿಜಿಸ್ಟ್ರೇಷನ್’ ಸಿನಿಮಾ ನಿರ್ದೇಶಕ ನವೀನ್ ದ್ವಾರಕನಾಥ್.
“ಭರವಸೆಯ ಬದುಕು’ ಎಂಬ ವಿಡಿಯೋ ಆಲ್ಬಂ ಹಾಡಿನ ಮೂಲಕ ನವೀನ್ ಆ್ಯಂಡ್ ಟೀಮ್ ಜನಸಾಮಾನ್ಯ ರಲ್ಲಿ ಭರವಸೆಯನ್ನು ಮೂಡಿಸಲು ಹೊರಟಿದೆ. “ಸಾಕು ಇನ್ನು ಸಾಕು ಬರಿ ದೂಷಣೆಯ ನಿಲ್ಲಿಸಿರಿ ಸಾಕು…’ ಎಂಬ ಸಾಲಿನಿಂದ ಶುರುವಾಗುವ ಈ ಮ್ಯೂಸಿಕ್ ವಿಡಿಯೋ ಆಲ್ಬಂ “ಆಲಾಪ್ ಕ್ರಿಯೇಷನ್ಸ್ ಪ್ರೊಡಕ್ಷನ್ ಹೌಸ್’ ಅಡಿಯಲ್ಲಿ ಹೊರಬಂದಿದೆ. ಹಾಡಿಗೆ ರಘು ದೀಕ್ಷಿತ್ ಮತ್ತು ವಾರಿಜಾಶ್ರೀ ದನಿಯಾಗಿದ್ದಾರೆ. ನವೀನ್ ನಿರ್ದೇಶನವಿರುವ ಈ ಹಾಡಿಗೆ ಚಂದನವನದ ಹಾಗೂ ರಂಗಭೂಮಿ ಕಲಾವಿದರು ಸಾಥ್ ನೀಡಿದ್ದಾರೆ.
ಹಾಡಿನಲ್ಲಿ ಅನಿರುದ್ಧ ಜತ್ಕರ್, ಚಂದನ್ ಶರ್ಮಾ, ಪೃಥ್ವಿ ಅಂಬರ್, ಸಿಂಪಲ್ ಸುನಿ, ವಸಿಷ್ಠ ಸಿಂಹ, ಸೋನು ಗೌಡ, ನಾಗೇಂದ್ರ ಪ್ರಸಾದ್, ಪಿ.ಡಿ. ಸತೀಶ್ ಚಂದ್ರ, ಕೃಷಿ ತಾಪಂಡ, ಹರ್ಷಿಕಾ ಪೂಣಚ್ಚ, ರಂಜನಿ ರಾಘವನ್, ರಘು ರಾಮನಕೊಪ್ಪ, ರೆಮೋ, ಜಯರಾಮ್ ಕಾರ್ತಿಕ್, ಕಿಶನ್ ಬೆಳಗಲಿ, ನವೀನ್ ಶಂಕರ್, ಮಯೂರ ರಾಘವೇಂದ್ರ, ಆರ್.ಜೆ. ಸೌಜನ್ಯ, ವರ್ಷಿಣಿ ಜಾನಕಿರಾಮ್, ಆರ್. ಅಭಿಲಾಷ್, ಯಶ್ ಶೆಟ್ಟಿ, ತ್ರಿವೇಣಿ ರಾವ್ ಮೊದಲಾದವರು ಕಾಣಿಸಿಕೊಂಡಿದ್ದಾರೆ.